3 ತಿಂಗ್ಳು ಸರ್ಕಾರಿ ರಜೆ ಕಟ್: ಶನಿವಾರ, ಭಾನುವಾರವೂ ಕೆಲ್ಸ ಮಾಡಲು ಸಿಎಂ ಸೂಚನೆ
ರಾಜ್ಯದಲ್ಲಿ ಬರ ನಿರ್ವಹಣೆಗೆ ಟೊಂಕಕಟ್ಟಿ ನಿಂತಿರುವ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಧಿಕಾರಿಗಳ ಸರ್ಕಾರಿ ರಜೆ ಖಡಿತಗೊಳಿಸಿದ್ದಾರೆ.
ಬೆಂಗಳೂರು (ಆ.02): ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಿನ 3 ತಿಂಗಳು ಯಾವುದೇ ರಜೆಯನ್ನು ತೆಗೆದುಕೊಳ್ಳದೇ ಶನಿವಾರ ಹಾಗೂ ಭಾನುವಾರವೂ ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ.
ಇಂದು (ಶುಕ್ರವಾರ) ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸುಮಾರು 8 ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಬರ ಪರಿಸ್ಥಿತಿ ಗಂಭೀರವಾಗಿದ್ದು, ಕುಡಿಯುವ ನೀರು, ಮೇವು ಪೂರೈಕೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದು, ನರೇಗಾ ಉದ್ಯೋಗ ಖಾತ್ರಿ ದುರುಪಯೋಗ ಮಾಡಿಕೊಳ್ಳದಂತೆ ಕ್ರಮಕೈಗೊಳ್ಳಿ ಎಂದು ಬಿಎಸ್ವೈ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ.
ಕಾನೂನುಬಾಹಿರ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಅದನ್ನು ತಪ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಅನ್ನಭಾಗ್ಯದ ಅಕ್ಕಿ ಗೋದಾಮುಗಳಲ್ಲಿ ಕೊಳೆಯುತ್ತಿದೆ. ಅಕ್ಕಿ ಹಾಳಾದ್ರೆ ಸಂಬಂಧಪಟ್ಟ ಅಧಿಕಾರಿಯೇ ಹೊಣೆ ಹೊರಬೇಕು. ಉಗ್ರಾಣದಲ್ಲಿರುವ ಅಕ್ಕಿ ಬಗ್ಗೆ ಮಾಹಿತಿ ನೀಡಬೇಕು. ಬಡವರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಇದೇ ವೇಳೆ ರಾಜ್ಯದಲ್ಲಿ ಬರ ಹಿನ್ನೆಲೆ ತುರ್ತು ಪರಿಸ್ಥಿತಿ ಅವಧಿಯನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಣೆ ಮಾಡಲಾಗಿದೆ. ಈ ಮೊದಲು ಜುಲೈ 31ರವರೆಗೆ ಇತ್ತು.
ಒಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಉನ್ನತ ಅಧಿಕಾರಿಗಳ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದ್ದಾರೆ.