ಡಿಕೆಶಿಗೆ ತಪ್ಪಿನ ಅರಿವು ಆಗಿರುವುದು ಸಂತೋಷ : ಬಿಎಸ್ ವೈ
ಡಿ.ಕೆ ಶಿವಕುಮಾರ್ ಅವರಿಗೆ ಇದೀಗ ತಪ್ಪಿನ ಅರಿವಾಗಿರುವುದು ಸಂತೋಷದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೈಂದೂರು : ‘ಈಗಲಾದರೂ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ತಮ್ಮ ಪಕ್ಷ ಮಾಡಿರುವ ತಪ್ಪಿನ ಅರಿವಾಗಿರುವುದು ಸಂತೋಷದ ಸಂಗತಿ.
ವೀರಶೈವ-ಲಿಂಗಾಯತ ಅಂತ ಗೊಂದಲ ಜಗಳ ತಂದಿಟ್ಟು, ಚುನಾವಣೆಯಲ್ಲಿ ಹಿನ್ನಡೆಯಾಗಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ಇನ್ನು ಮುಂದೆಯಾದರೂ ಜಾತಿ-ಧರ್ಮದ ವಿಚಾರದಲ್ಲಿ ಗೊಂದಲ ಮಾಡುವ ಕೆಲಸವನ್ನು ಕಾಂಗ್ರೆಸ್ ಬಿಟ್ಟು ಬಿಡಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ ಲೋಕಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತ ಪ್ರಚಾರಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜಕೀಯ ಮಾಡೋಣ, ಆದರೆ ಜಾತಿ ಮತ್ತು ಸಮಾಜ ಒಡೆಯುವ ಕೆಲಸವನ್ನು ಯಾರೂ ಮಾಡುವುದು ಬೇಡ. ಜಾತಿಗಳ ನಡುವೆ ಜಗಳ ತಂದಿಟ್ಟು ಕಾಂಗ್ರೆಸ್ ಈಗಾಗಲೇ ಕೈಸುಟ್ಟುಕೊಂಡಿದೆ ಎಂದರು.
ಇದೇ ವೇಳೆ, ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಕುಲಕರ್ಣಿ ಅವರ ಹೇಳಿಕೆಗಳಿಗೆ ಉತ್ತರಿಸುವುದಿಲ್ಲ ಎಂದು ಹೇಳಿದರು.