ಬಿಎಂಟಿಸಿ ಚಾಲಕ-ನಿರ್ವಾಹಕನಿಂದ ಮತದಾನ ಜಾಗೃತಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವಲ್ಲಿ ತೊಡಗಿವೆ. ಈ ನಡುವೆ ಬಿಎಂಟಿಸಿಯ ಘಟಕ 33 ರ ಚಾಲಕ ಮತ್ತು ನಿರ್ವಾಹಕ ಸೇರಿಕೊಂಡು ಪ್ರಯಾಣಿಕರಿಗೆ ಮತದಾನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಬೆಂಗಳೂರು (ಏ. 09): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಲವು ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವಲ್ಲಿ ತೊಡಗಿವೆ. ಈ ನಡುವೆ ಬಿಎಂಟಿಸಿಯ ಘಟಕ 33ರ ಚಾಲಕ ಮತ್ತು ನಿರ್ವಾಹಕ ಸೇರಿಕೊಂಡು ಪ್ರಯಾಣಿಕರಿಗೆ ಮತದಾನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಚನ್ನಮ್ಮನಕೆರೆ ಅಚ್ಚುಕಟ್ಟು- ಮೆಜೆಸ್ಟಿಕ್ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಯೋಗೇಶ್ ಮತ್ತು ನಿರ್ವಾಹಕ ವಸಂತಕುಮಾರ್ ಕರ್ತವ್ಯದ ವೇಳೆ ಪ್ರಯಾಣಿಕರಿಗೆ ಮತದಾನ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಬಸ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕರಪತ್ರ ಹಂಚಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
‘ಮರೆಯದಿರಿ ಮತದಾನ, ಮರೆತರೆ ಬದುಕಿಗಿಲ್ಲ ಸ್ಥಾನಮಾನ’, ‘ಮಾಡದಿದ್ದರೆ ಮಾತದಾನ, ಅದು ಪ್ರಜಾಪ್ರಭುತ್ವದ ಅಪಮಾನ, ‘ಮತದಾನ ನಮ ಹಕ್ಕು, ಮರತರೆ ದೇಶ ಹಿಡಿಯುತ್ತೆ ತುಕ್ಕು’, ‘ಚಾಲಕ-ನಿರ್ವಾಹಕ ನಿಮ್ಮ ಮತದಾನವಾಗಲಿ ನಿರ್ಣಾಯಕ’, ‘ಮತದಾನ ಮಾಡದೆ ಕಳೆದರೆ ರಜೆ, ಇನ್ನೈದು ವರ್ಷ ಸ್ವಾಭಿಮಾನಕ್ಕೆ ಸಜೆ’, ‘ಮತದಾನ ದೇಶಾಭಿಮಾನದ ಸಂಕೇತ, ಮತದಾನ ಮಾಡದಿದ್ದರೆ ಅದುವೇ ದೇಶದ ದುರಂತ’, ‘ಮರೆಯದೇ ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು’ ಎಂಬಿತ್ಯಾದಿ ಘೋಷ ವಾಕ್ಯಗಳಿರುವ ಕರಪತ್ರ ಹಂಚಿ ಮತದಾನದ ಮಹತ್ವ ಸಾರುತ್ತಿದ್ದಾರೆ.
ಮತದಾನ ಪ್ರತಿಯೊಬ್ಬರ ಹಕ್ಕು. ಈ ಹಕ್ಕನ್ನು ಪ್ರತಿಯೊಬ್ಬರು ತಪ್ಪದೇ ಚಲಾಯಿಸಬೇಕು. ಈ ಹಿನ್ನೆಲೆಯಲ್ಲಿ ಕರಪತ್ರ ಮುದ್ರಿಸಿ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆಸೇರಿದಂತೆ ಮಾರ್ಗದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಒಂದು ದಿನ ಈ ಜಾಗೃತಿ ಮುಂದುವರಿಯಲಿದೆ ಎಂದು ಚಾಲಕ ಯೋಗೇಶ್ ತಿಳಿಸಿದರು.