ಇವರನ್ನು ಅಭಿಮಾನಿ ಅಂತಾ ಕರೆಯುತ್ತಿರೋ, ಹುಚ್ಚು ಅಭಿಮಾನಿ ಅಂತ ಕರಿತಿರೋ ನಿಮಗೆ ಬಿಟ್ಟಿದ್ದು. ಆದರೆ ಇವರ ಅಭಿಮಾನದ ಪರಾಕಾಷ್ಠೆ ಮೆಚ್ಚಲೇಬೇಕು. ಬೀದರ್ ಜಿಲ್ಲೆಯ ಲಿಂಗಾಯತ ಸಮನ್ವಯ ಸಮಿತಿ ಜಿಲ್ಲಾ ಮುಖಂಡ ಬಸವರಾಜ ಭತಮುರ್ಗೆ ಎಂ.ಬಿ.ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.   

ಬೀದರ್ [ಜೂನ್.9] : ಇಲ್ಲೊಬ್ಬ ಅಭಿಮಾನಿ ತಮ್ಮ ಮುಖಂಡರಿಗಾಗಿ ರಕ್ತವನ್ನೇ ಹರಿಸಿದ್ದಾನೆ. ಒಂದೆಡೆ ಡಿಸಿಎಂ ಪಟ್ಟಕ್ಕಾಗಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ, ಅತೃಪ್ತ ಶಾಸಕ ಎಂ.ಬಿ.ಪಾಟೀಲ್ ಹೋರಾಟ-ತಿರುಗಾಟ ನಡೆಸುತ್ತಾ ಇದ್ದರೆ ಇತ್ತ ಎಂ.ಬಿ.ಪಾಟೀಲರ ಅಭಿಮಾನಿಯೊಬ್ಬ ರಕ್ತವನ್ನೇ ಹರಿಸಿದ್ದಾನೆ. 

Add Asianetnews Kannada as a Preferred SourcegooglePreferred

ಬೀದರ್ ಜಿಲ್ಲೆಯ ಲಿಂಗಾಯತ ಸಮನ್ವಯ ಸಮಿತಿ ಜಿಲ್ಲಾ ಮುಖಂಡ ಬಸವರಾಜ ಭತಮುರ್ಗೆ ಎಂ.ಬಿ.ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ 1.50 ಕೋಟಿ ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮಾಜಕ್ಕೆ ಮೈತ್ರಿ ಸರ್ಕಾರದಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ರಕ್ತದ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.

ಅತೃಪ್ತ ಶಾಸಕರ ನಡೆ, ಕಾಂಗ್ರೆಸ್ ಹೈ ಕಮಾಂಡ್ ಕಡೆ

ಜತೆಗೆ ಲಿಂಗಾಯತ ಸಮಾಜದ ಪ್ರಭಾವಿ ಮುಖಂಡ ಎಂ.ಬಿ. ಪಾಟೀಲ್ ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಲಿಂಗಾಯತ ಸಮಾಜದ 9 ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಒಟ್ಟಿನಲ್ಲಿ ಹಿಂದೆ ಪ್ರೇಮಿಗಳು ರಕ್ತದಲ್ಲಿ ಪತ್ರ ಬರೆದು ಸುದ್ದಿ ಮಾಡುತ್ತಿದ್ದರೆ ಇಂದು ರಾಜಕಾರಣಿಗಳ ಅಭಿಮಾನಿಗಳು ರಕ್ತದ ಪತ್ರ ಬರೆಯಲು ಮುಂದಾಗಿದ್ದಾರೆ. ಎಂ.ಬಿ.ಪಾಟೀಲರಿಗೆ ಸಚಿವ ಸ್ಥಾನ ಸಿಗತ್ತೋ, ಡಿಸಿಎಂ ಸಿಗತ್ತೋ ಗೊತ್ತಿಲ್ಲ. ಆದರೆ ರಕ್ತದಲ್ಲಿ ಪತ್ರ ಬರೆದ ಮುಖಂಡ ಸುದ್ದಿ ಮಾಡಿದ್ದಾನೆ.