ಟಿಪ್ಪು ಬದಲು ಕುಟ್ಟಪ್ಪ ಜಯಂತಿ!
ಟಿಪ್ಪು ಜಯಂತಿ ಆಚರಣೆ ಸಂಬಂಧ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ಈಗ ಕೊಡಗಿನ ಬಿಜೆಪಿ ಮುಖಂಡರು ಜಿಲ್ಲಾಡಳಿತದ ಮುಂದೆ ಹೊಸ ಪ್ರಸ್ತಾಪ ಇಟ್ಟಿದ್ದಾರೆ. 2015ರಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಸಾವಿಗೀಡಾಗಿದ್ದ ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಅವರ ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ಸಂಬಂಧ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಾಗಲೇ ಈಗ ಕೊಡಗಿನ ಬಿಜೆಪಿ ಮುಖಂಡರು ಜಿಲ್ಲಾಡಳಿತದ ಮುಂದೆ ಹೊಸ ಪ್ರಸ್ತಾಪ ಇಟ್ಟಿದ್ದಾರೆ. 2015ರಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಸಾವಿಗೀಡಾಗಿದ್ದ ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಅವರ ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಜಿಲ್ಲಾ ಮೋರ್ಚಾ ಮುಖಂಡರು ಅಪರ ಜಿಲ್ಲಾಧಿಕಾರಿ ಸತೀಶ್ಕುಮಾರ್ ಅವರನ್ನು ಭೇಟಿ ಮಾಡಿ, ಟಿಪ್ಪು ಜಯಂತಿ ಆಚರಿಸಬಾರದು ಹಾಗೂ ಕುಟ್ಟಪ್ಪ ಜಯಂತಿ ಆಚರಣೆಗೆ ಅನುಮತಿ ನೀಡಬೇ ಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಟಿಪ್ಪು ಕನ್ನಡದ ಉಳಿವಿಗಾಗಿ ಕೆಲಸ ಮಾಡಿಯೇ ಇಲ್ಲ. ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದು ಮಾತ್ರವಲ್ಲದೆ ಕೊಡವರ ನರಮೇಧ ನಡೆಸಿದ್ದಾನೆ. ಇಂತಹ ಟಿಪ್ಪುವಿನ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. 2015 ಟಿಪ್ಪು ಜಯಂತಿ ಆಚರಣೆ ವೇಳೆ ಮೃತಪಟ್ಟ ಹಿಂದೂಪರ ಸಂಘಟನೆಯ ಮುಖಂಡ ಕುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಈ ಬಾರಿ ನ.10ರಂದು ಜಿಲ್ಲೆಯಾದ್ಯಂತ ಕುಟ್ಟಪ್ಪ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಆಚರಣೆ ಸ್ಥಳ ಗೌಪ್ಯ
ಕುಟ್ಟಪ್ಪ ಜಯಂತಿ ಕಾರ್ಯಕ್ರಮ ನಡೆಯುವ ಸ್ಥಳ ಘೋಷಿಸಿದರೆ ಕಾರ್ಯಕ್ರಮ ಯಶಸ್ವಿಗೊಳ್ಳದಂತೆ ಸರ್ಕಾರ ಮುಂದಾಗುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳ ಗೌಪ್ಯವಾಗಿ ಇಡಲಾಗಿದೆ. ಟಿಪ್ಪು ಜಯಂತಿಯನ್ನು 4 ಗೋಡೆಗಳ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರ ಆಚರಿಸುವಂತೆ ಕುಟ್ಟಪ್ಪ ಜಯಂತಿಯನ್ನು ಆಚರಿಸುವುದಿಲ್ಲ. ಬಹಿರಂಗವಾಗಿಯೇ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ ಹೇಳಿದರು.