ಸಿಎಂ ಪರಮಾಪ್ತನ ಭೇಟಿ ಬೆನ್ನಲ್ಲೇ ರಾಜೀನಾಮೆ ನೀಡಲಿ ಎಂದ ಈಶ್ವರಪ್ಪ
ಕರ್ನಾಟಕ ರಾಜಕೀಯ ಪ್ರಹಸನ ಮುಂದುವರಿದಿದ್ದು, ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಇತ್ತ ಸಿಎಂ ಪರಮಾಪ್ತನ ಭೇಟಿ ಬೆನ್ನಲ್ಲೇ ನೈತಿಕತೆ ಪ್ರಶ್ನೆ ಎತ್ತಿದ ಈಶ್ವರಪ್ಪ ರಾಜೀನಾಮೆ ನೀಡಲಿ ಎಂದಿದ್ದಾರೆ.
ಬೆಂಗಳೂರು [ಜು.12] : ಕರ್ನಾಟಕ ಮುಂಗಾರು ಅಧಿವೇಶನ ಆರಂಭದ ದಿನ ಇದ್ದಿದ್ದು ಸಂತಾಪ ಸೂಚನೆ ಅಜೆಂಡಾ ಮಾತ್ರ. ಆದರೆ ಇಂದು ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಈಶ್ವರಪ್ಪ ವಿಶ್ವಾಸ ಮತ ಯಾಚನೆಗೆ ಸಿಎಂ ಸಮಯ ಕೊಡುತ್ತೇನೆ ಎಂದು ಹೇಳಿದರು. ಇದು ಯಾಕೆಂದು ತಿಳಿಯುತ್ತಿಲ್ಲ. ಕುಮಾರಸ್ವಾಮಿ ಅವರ ಸ್ಟ್ರಾಟಜಿ ಏನೆನ್ನುವುದು ತಿಳಿದಿಲ್ಲ. ಅವರ ಕೆಲಸ ಅವರು ಮಾಡಲಿ. ನಾವೇನು ಮಾಡಬೇಕು ಎನ್ನುವುದನ್ನು ಸೋಮವಾರ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಜ್ಯ ರಾಜಕೀಯದಲ್ಲಿ ಪ್ರಹಸನ ಮುಂದುವರಿದಿದ್ದು, ಇಷ್ಟಾದರೂ ಕೂಡ ಕುಮಾರಸ್ವಾಮಿ ಅವರಿಗೆ ಹುದ್ದೆಯಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಇಲ್ಲ. ನಾನು ಈಗಲೂ ಇದನ್ನೇ ಹೇಳುತ್ತೇನೆ. ಅವರು ರಾಜೀನಾಮೆ ಕೊಟ್ಟು ಹೋಗುವುದು ಉತ್ತಮ ಎಂದಿದ್ದಾರೆ. ಸಿಎಂ ಪರಮಾಪ್ತ ಸಾ ರಾ ಮಹೇಶ್ ಭೇಟಿ ಬೆನ್ನಲ್ಲೇ ಈಶ್ವರಪ್ಪ, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಅತೃಪ್ತ ಶಾಸಕರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಎರಡೂ ವಿಚಾರದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದೆ. ನಾವೂ ಕೂಡ ಮಂಗಳವಾರದ ತೀರ್ಪು ಎದುರು ನೋಡ್ತಿದ್ದೇವೆ ಎಂದು ಬಿಜೆಪಿ ನಾಯಕ ಈಶ್ವರಪ್ಪ ಹೇಳಿದ್ದಾರೆ.