ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರಚಾರ ತಂತ್ರ ರೂಪಿಸಲು ಆಗಮಿಸುವ ಮುಖಂಡರ ವಾಸ್ತವ್ಯಕ್ಕಾಗಿ ಪಕ್ಷದ ಕೇಂದ್ರ ಕಚೇರಿಯಿರುವ ನಗರದ ಮಲ್ಲೇಶ್ವರ ಸುತ್ತ ಮುತ್ತ ಬಾಡಿಗೆ ಅಥವಾ ಗುತ್ತಿಗೆಗೆ ಮನೆ, ಫ್ಲ್ಯಾಟ್ ಬೇಕಾಗಿದೆ. ರಾಜ್ಯ ಬಿಜೆಪಿ ನಾಯಕರು ಈಗ ಮನೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು (ಡಿ.23): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಪ್ರಚಾರ ತಂತ್ರ ರೂಪಿಸಲು ಆಗಮಿಸುವ ಮುಖಂಡರ ವಾಸ್ತವ್ಯಕ್ಕಾಗಿ ಪಕ್ಷದ ಕೇಂದ್ರ ಕಚೇರಿಯಿರುವ ನಗರದ ಮಲ್ಲೇಶ್ವರ ಸುತ್ತ ಮುತ್ತ ಬಾಡಿಗೆ ಅಥವಾ ಗುತ್ತಿಗೆಗೆ ಮನೆ, ಫ್ಲ್ಯಾಟ್ ಬೇಕಾಗಿದೆ. ರಾಜ್ಯ ಬಿಜೆಪಿ ನಾಯಕರು ಈಗ ಮನೆ ಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬರುವ ಹೊಸ ವರ್ಷದ ಜನವರಿಯಿಂದ ಚುನಾವಣೆ ಮುಗಿಯುವ ಏಪ್ರಿಲ್-ಮೇ ತಿಂಗಳವರೆಗೆ ಬಾಡಿಗೆ ಅಥವಾ ಗುತ್ತಿಗೆ (ಲೀಸ್) ಆಧಾರದ ಮೇಲೆ ಮನೆಗಳನ್ನು ತೆಗೆದುಕೊಂಡು ವಿವಿಧ ರಾಜ್ಯಗಳಿಂದ ಬರುವ ಮುಖಂಡರ ವಾಸ್ತವ್ಯಕ್ಕಾಗಿ ಬಳಸಲಾಗುವುದು. ತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ಏರ್ಪಾಟು ಮಾಡುವುದರಿಂದ ವೆಚ್ಚವೂ ಅಧಿಕವಾಗಲಿದೆ. ಜತೆಗೆ ತಂತ್ರಗಾರಿಕೆ ರೂಪಿಸಲು ಖಾಸಗಿತನವೂ ಇರುವುದಿಲ್ಲ. ಈ ಕಾರಣಕ್ಕಾಗಿ ಮನೆಗಳ ಹುಡುಕಾಟ ನಡೆಸಲಾಗುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಯಾವುದೇ ರಾಜ್ಯದಲ್ಲಿ ಚುನಾವಣೆ ಎದುರಾಗಲಿ, ಸುಮಾರು ಮೂರ್ನಾಲ್ಕು ತಿಂಗಳು ಮೊದಲೇ ಅಲ್ಲಿಗೆ ಬಿಜೆಪಿಯ ಕೆಲವು ರಾಷ್ಟ್ರೀಯ ನಾಯಕರೂ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ಮುಖಂಡರು ಆಗಮಿಸಿ ತೆರೆಮರೆಯಲ್ಲಿ ಕೆಲಸ ಆರಂಭಿಸುತ್ತಾರೆ. ಸ್ಥಳೀಯವಾಗಿ ಪಕ್ಷ ಸಂಘಟನೆ ಬಲಪಡಿಸುವುದೂ ಸೇರಿದಂತೆ ಪಕ್ಷದಲ್ಲಿರುವ ಲೋಪದೋಷಗಳನ್ನು ಹೇಗೆ ಸರಿಪಡಿಸಬಹುದು?

ಸ್ಥಳೀಯ ರಾಜಕೀಯ ಲೆಕ್ಕಾಚಾರಗಳೇನು? ಮತದಾರರ ಮನದಲ್ಲಿ ಏನಿದೆ ಎಂಬುದನ್ನೂ ಈ ಮುಖಂಡರು ಸೂಕ್ಷ್ಮವಾಗಿ ಅರಿತುಕೊಂಡು ತಂತ್ರ ರೂಪಿಸುತ್ತಾರೆ. ಇನ್ನು ಕೆಲವು ನಾಯಕರು ಚುನಾವಣೆ ಮುಗಿಯುವವರೆಗೆ ಆಗಾಗ ಬಂದು ಹೋಗುತ್ತಲೇ ಇರುತ್ತಾರೆ. ತೀರಾ ಹಿರಿಯ ನಾಯಕರು ಬಂದಾಗ ಅವರಿಗೆ ಹೋಟೆಲ್ ಅಥವಾ ಸರ್ಕಾರಿ ಅತಿಥಿಗೃಹಗಳ ವ್ಯವಸ್ಥೆ ಮಾಡಲಾಗುತ್ತದೆ.

ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರ ವಾಸ್ತವ್ಯಕ್ಕಾಗಿ ಮಲ್ಲೇಶ್ವರದ ಸಮೀಪದಲ್ಲೇ ಮನೆಯೊಂದನ್ನು ಬಾಡಿಗೆ ಮೇಲೆ ಪಡೆಯಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಮುರಳೀಧರರಾವ್ ಅವರು ಬೆಂಗಳೂರಿಗೆ ಬಂದಾಗ ಈ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಿಲ್ಲಾವೊಂದನ್ನು ಗುರುತಿಸಲಾಗಿದೆ.