ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ಬೆಂಗಳೂರು ನಗರದ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಪಾಲಿಕೆ ಸದಸ್ಯರ ಎರಡು ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

 ಬೆಂಗಳೂರು (ಆ. 20): ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗಾಗಿ ಬೆಂಗಳೂರು ನಗರದ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಪಾಲಿಕೆ ಸದಸ್ಯರ ಎರಡು ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಬಿಜೆಪಿ ಕಚೇರಿಯಲ್ಲಿ ಬೆಂಗಳೂರು ನಗರ ಶಾಸಕರು ಮತ್ತು ಪಾಲಿಕೆ ಸದಸ್ಯರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಹಿರಿಯ ಮುಖಂಡ ಆರ್‌.ಅಶೋಕ್‌ ಈ ವಿಷಯ ತಿಳಿಸಿದರು.

ದೇಶದ ರಕ್ಷಣೆಗೆ ಅತಿ ಹೆಚ್ಚು ಸೈನಿಕರನ್ನು ನೀಡಿರುವ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುತ್ತಿರುವ ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆ ಪ್ರಸ್ತುತ ಸಂಕಷ್ಟಕ್ಕೆ ಸಿಲುಕಿದೆ. ಅವರಿಗೆ ನಮ್ಮ ನೆರವು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿನ ಜನತೆಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ಇಲ್ಲಿಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಸಹಾಯ ಮಾಡಲು ನಿರ್ಧರಿಸಿರುವುದಾಗಿ ವಿವರಿಸಿದರು.

ನಮ್ಮ ಕಣ್ಣ ಮುಂದೆಯೇ ವೀರಭೂಮಿ ತನ್ನ ಸ್ವರೂಪ ಕಳೆದುಕೊಂಡಿದೆ. ಕೊಡಗು ಜಿಲ್ಲೆಯ ಜನ ಪರಿತಪಿಸುತ್ತಿದ್ದಾರೆ. ಈ ಪ್ರದೇಶ ಸಾಮಾನ್ಯ ಸ್ಥಿತಿಗೆ ಬರಲು ಕನಿಷ್ಠ ಐದು ವರ್ಷವಾದರೂ ಬೇಕು. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಜನ ಸಹಾಯ ಹಸ್ತ ಚಾಚಬೇಕು. ಈ ಅಭಿಯಾನದಲ್ಲಿ ಇಡೀ ಬೆಂಗಳೂರಿನ ಜನ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಒಂದೇ ದಿನ 11 ಲಕ್ಷ ರು. ಸಂಗ್ರಹ:

ಶಾಸಕರು ಹಾಗೂ ಜನ ಪ್ರತಿನಿಧಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 11.05 ಲಕ್ಷ ರು. ಸಂಗ್ರಹವಾಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಎಲ್ಲಾ ವಸ್ತುಗಳನ್ನು ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು. ಸಹಾಯ ಮಾಡುವವರು ಹಣ ಮತ್ತು ಸೇವಾಭಾರತಿ ಹೆಸರಿನಲ್ಲಿ ಚೆಕ್‌ಗಳನ್ನು ನೀಡಬಹುದು. ಈ ವಸ್ತುಗಳನ್ನು ಖುದ್ದು ನಾನೇ ಅಲ್ಲಿಗೆ ಹೋಗಿ ಸಂತ್ರಸ್ತರಿಗೆ ತಲುಪಿಸುತ್ತೇನೆ ಎಂದರು.