ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ ಬಿಜೆಪಿ ನಾಯಕಿಗೆ ದಂಡ!
ಶಬರಿಮಲೆ ವಿವಾದದಲ್ಲಿ ಕೇರಳ ಬಿಜೆಪಿ ಘಟಕಕ್ಕೆ ಭಾರೀ ಹಿನ್ನೆಡೆ! ಕೇರಳ ಹೈಕೋರ್ಟ್ ನಿಂದ ಬಿಜೆಪಿ ನಾಯಕಿಗೆ 25 ಸಾವಿರ ರೂ. ದಂಡ! ಕೇರಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್! ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸಮಯಕ್ಕೆ ಬಾರದ ನಾಯಕಿ! ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಆರೋಪದ ಮೇಲೆ ದಂಡ! ಶೋಭಾ ಸುರೇಂದ್ರನ್ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ತಿರುವನಂತಪುರಂ(ಡಿ.04): ಶಬರಿಮಲೆ ವಿವಾದ ಕುರಿತಂತೆ ಕೇರಳ ಬಿಜೆಪಿ ಘಟಕಕ್ಕೆ ಕೇರಳ ಹೈಕೋರ್ಟ್ ನಲ್ಲಿ ಬಹುದೊಡ್ಡ ಹಿನ್ನಡೆಯಾಗಿದೆ.
ಶಬರಿಮಲೆಯಲ್ಲಿ ಪೊಲೀಸ್ ಆ್ಯಕ್ಷನ್ ವಿರೋಧಿಸಿ ಬಿಜೆಪಿ ನಾಯಕಿಯೊಬ್ಬರು ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಆದರೆ ಅರ್ಜಿಯ ವಿಚಾರಣೆ ವೇಳೆ ಸರಿಯಾದ ಸಮಯಕ್ಕೆ ಬಾರದ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಿದ್ದಲ್ಲದೇ ಆ ನಾಯಕಿಗೆ 25 ಸಾವಿರ ರೂ. ದಂಡ ಕೂಡ ವಿಧಿಸಲಾಗಿದೆ.
ಶಬರಿಮೆಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ಅಯ್ಯಪ್ಪ ಭಕ್ತರು ಭಾರೀ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ಭಕ್ತರ ನಡುವೆ ಭಾರೀ ಜಟಾಪಟಿ ನಡೆದಿತ್ತು.
ಆದರೆ ಅಯ್ಯಪ್ಪ ಭಕ್ತರ ಮೇಲೆ ಪೊಲೀಸ್ ದಾಳಿ ವಿರೋಧಿಸಿ ಕೇರಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಆದರೆ ಅರ್ಜಿಯ ವಿಚಾರಣೆಗೆ ಶೋಭಾ ಸುರೇಂದ್ರನ್ ಸಮಯಕ್ಕೆ ಸರಿಯಾಗಿ ಹಾಜರಾಗಲಿಲ್ಲ. ಇದರಿಂದ ಕುಪಿತಗೊಂಡ ನ್ಯಾಯಾಧೀಶರು, ಶೋಭಾ ಅರ್ಜಿ ತಿರಸ್ಕರಿಸಿದ್ದಲ್ಲದೇ ಆಧಾರರಹಿತ ಆರೋಪ ಮಾಡಿದ್ದಕ್ಕಾಗಿ 25 ಸಾವಿರ ರೂ. ದಂಡ ಕೂಡ ವಿಧಿಸಿದೆ.
ಬಳಿಕ ಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕೆ ಶೋಭಾ ನ್ಯಾಯಾಲಯದ ಕ್ಷಮೆ ಕೋರಿದ್ದಾರೆ. ಅಲ್ಲದೇ 25 ಸಾವಿರ ರೂ. ದಂಡವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದಾರೆ.