ಹಜ್‌ ಯಾತ್ರೆಗೆ ತೆರಳಿದ್ದ ತಮ್ಮ ಸ್ವಂತ ಮಗಳು ಮತ್ತು ಮೊಮ್ಮಗಳನ್ನು ಹೈದರಾಬಾದ್‌ ವಿಮಾನನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ ಎಂಬ ಸಂದೇಶದೊಂದಿಗೆ, ಸುಬ್ರಮಣಿಯನ್‌ ಸ್ವಾಮಿ ಮುಸ್ಲಿಂ ಮಹಿಳೆಯರೊಂದಿಗೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಇದರ ಸತ್ಯಾಸತ್ಯತೆ ಏನು?

ಕಟ್ಟಾಹಿಂದು ನಾಯಕರೆಂದೇ ಗುರುತಿಸಿಕೊಂಡಿರುವ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್‌ ಸ್ವಾಮಿ ಈಗ ಹಜ್‌ ಯಾತ್ರೆಗೆ ತೆರಳಿದ್ದ ತಮ್ಮ ಸ್ವಂತ ಮಗಳು ಮತ್ತು ಮೊಮ್ಮಗಳನ್ನು ಹೈದರಾಬಾದ್‌ ವಿಮಾನನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ ಎಂಬ ಸಂದೇಶದೊಂದಿಗೆ, ಸುಬ್ರಮಣಿಯನ್‌ ಸ್ವಾಮಿ ಮುಸ್ಲಿಂ ಮಹಿಳೆಯರೊಂದಿಗೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗಿದೆ. ಫೇಸ್‌ಬುಕ್‌ನಲ್ಲಿ ಈ ಪೋಸ್ಟ್‌ ಇದೇ ಜೂನ್‌ 25ರಂದು ‘ಚಂದನ್‌ ಪ್ರತಿಹಸ್‌್ತ’ ಎಂಬುವರ ಖಾತೆಯಿಂದ ಮೊದಲಬಾರಿಗೆ ಅಪ್‌ಲೋಡ್‌ ಆಗಿದ್ದು, 1900 ಬಾರಿ ಶೇರ್‌ ಮಾಡಲಾಗಿದೆ. ಫೋಟೋದಲ್ಲಿರುವವರನ್ನು ಸುಬ್ರಮಣಿಯನ್‌ ಸ್ವಾಮಿ ಮಗಳು ಮತ್ತು ಮೊಮ್ಮಗಳು ಎಂದು ಹೇಳಲಾಗಿದೆ.

Add Asianetnews Kannada as a Preferred SourcegooglePreferred

ಆದರೆ ನಿಜಕ್ಕೂ ಹಜ್‌ಗೆ ಹೋಗುವ ಮಗಳು ಮತ್ತು ಮೊಮ್ಮಗಳನ್ನು ಸುಬ್ರಮಣಿಯನ್‌ ಸ್ವಾಮಿ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರೇ ಎಂದು ಹುಡುಕ ಹೊರಟಾಗ ಈ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂಬುದು ಪತ್ತೆಯಾಗಿದೆ.

ಮೇ.4ರಂದು ಜಗದೀಶ್‌ ಶೆಟ್ಟಿಎಂಬುವವರು ಇದೇ ಫೋಟೋವನ್ನು ಟ್ವೀಟ್‌ ಮಾಡಿ, ‘ಇದು ಬೆಂಗಳೂರು ವಿಮಾನ ನಿಲ್ದಾಣ. ಮುಸ್ಲಿಂ ಮಹಿಳೆಯರು ಸುಬ್ರಮಣಿಯನ್‌ ಸ್ವಾಮಿಯನ್ನು ಅಭಿನಂದಿಸಿ, ಅವರೊಂದಿಗೆ ಫೋಟೋ ಬಯಸಿದ್ದರು.’ ಎಂದು ಹೇಳಿದ್ದರು. ‘ಆಲ್ಟ್‌ನ್ಯೂಸ್‌’ ಶೆಟ್ಟಿಅವರನ್ನೇ ಸಂಪರ್ಕಿಸಿ, ಸ್ಪಷ್ಟೀಕರಣ ಕೇಳಿದ್ದು,‘ ಫೋಟೋದಲ್ಲಿರುವ ಮುಸ್ಲಿಂ ಮಹಿಳೆಯರು ಸುಬ್ರಮಣಿಯನ್‌ ಸ್ವಾಮಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಬಯಸಿದ್ದರು. ನಾನೇ ಫೋಟೋವನ್ನು ಕ್ಲಿಕ್ಕಿಸಿದ್ದೆ. ಫೋಟೋದಲ್ಲಿರುವವರು ಸುಬ್ರಮಣಿಯನ್‌ ಸ್ವಾಮಿ ಅವರ ಮಗಳು, ಮೊಮ್ಮಗಳಲ್ಲ’ ಎಂದಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ವಿಷಯವಾಗಿ ‘ಟೈಮ್ಸ್‌ ನೌ’ ಚರ್ಚೆಯಲ್ಲಿ ಭಾಗವಹಿಸಲು ಸುಬ್ರಮಣಿಯನ್‌ ಸ್ವಾಮಿ ಮೇ.4ರಂದು ಬೆಂಗಳೂರಿಗೆ ಬಂದಿದ್ದರು.