ಸಮ್ಮಿಶ್ರ ಸರ್ಕಾರದ ಅಸ್ಥಿರತೆಯ ಲಾಭ ಪಡೆಯುತ್ತಾ ಬಿಜೆಪಿ ..?
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದರೂ 2 ಪಕ್ಷಗಳ ನಡುವೆ ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಕಂಡು ಬರುತ್ತಿಲ್ಲ.
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅಸ್ಥಿರತೆಯ ಲಾಭ ಪಡೆಯುವ ಉದ್ದೇಶ ನಮಗಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ಶಾಸಕ ವಿ.ಸೋಮಣ್ಣ ಹೇಳಿದರು. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸ್ಥಿರವಾಗಿದ್ದರೆ ಜನರಿಗೆ ಒಳ್ಳೆಯದಾಗುತ್ತದೆ.
ಅಸ್ಥಿರವಾದರೆ ಜನರೇ ಈ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು. ಪರಿಷತ್ತಿನ ನೂತನ ಸದಸ್ಯರಾಗಿ ದೇವೇಗೌಡ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಸುದ್ದಿಗಾರರ ಜೊತೆ ಮಾತನಾ ಡಿದ ಅವರು, ಸರ್ಕಾರ ಸ್ವಲ್ಪ ಕಾಲ ನಡೆಯುತ್ತದೆ. ಈ ವಿಷಯದಲ್ಲಿ ಬಿಜೆಪಿ ಏನೂ ಮಾಡುವುದಿಲ್ಲ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅನುಭವಿಗಳಾಗಿದ್ದು, ಇಂಥದ್ದನ್ನು ಸಾಕಷ್ಟು ನೋಡಿದ್ದಾರೆ. ಅವರಿಗೆ ಎಲ್ಲಿ ಹೇಗೆ ದಾಳ ಹಾಕಬೇಕು ಎಂಬುದು ಗೊತ್ತಿದೆ ಎಂದರು.
ಸಮ್ಮಿಶ್ರ ಸರ್ಕಾರ ಬಜೆಟ್ ಮಂಡಿಸಿದ ಕೂಡಲೇ ಎಲ್ಲವೂ ಸರಿ ಹೋಗುತ್ತದೆ ಎಂಬುದು ತಪ್ಪುಗ್ರಹಿಕೆಯಾ ಗಿದೆ. ಹಾಗೇ ನೋಡಿದರೆ ಮಂಡಿಸಿರುವ ಎಲ್ಲ ಬಜೆಟ್ ಗಳು ಸರಿಯಾಗಿ ಅನುಷ್ಠಾನಗೊಂಡಿದ್ದರೆ ನಮ್ಮ ರಾಜ್ಯ ರಾಮರಾಜ್ಯವಾಗುತ್ತಿತ್ತು. ಬಜೆಟ್ನಲ್ಲಿ ಹೇಳಿರುವ ಕೆಲವು ಅಂಶಗಳು ಜಾರಿಯಾಗುತ್ತವೆ. ಕೆಲವು ಅನುಷ್ಠಾನ ಆಗುವುದಿಲ್ಲ. ಬಜೆಟ್ ಮಂಡನೆ ಸಹಜ ಪ್ರಕ್ರಿಯೆ ಅಷ್ಟೆ ಎಂದು ತಿಳಿಸಿದರು.