ಈ ನಾಯಕರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲೇ ವಿರೋಧ
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ವಲಸೆ ಪರ್ವ ಮುಂದುವರಿದಿದೆ. ಬುಧವಾರವೂ ಹಲವು ರಾಜಕಾರಣಿಗಳು ಪಕ್ಷಾಂತರ ಮಾಡಿದ್ದರೆ, ಇನ್ನು ಕೆಲವರು ಅನ್ಯಪಕ್ಷಗಳಿಗೆ ವಲಸೆ ಹೋಗುವ ಸುಳಿವಿತ್ತಿದ್ದಾರೆ.
ಬೆಂಗಳೂರು : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರ ವಲಸೆ ಪರ್ವ ಮುಂದುವರಿದಿದೆ. ಬುಧವಾರವೂ ಹಲವು ರಾಜಕಾರಣಿಗಳು ಪಕ್ಷಾಂತರ ಮಾಡಿದ್ದರೆ, ಇನ್ನು ಕೆಲವರು ಅನ್ಯಪಕ್ಷಗಳಿಗೆ ವಲಸೆ ಹೋಗುವ ಸುಳಿವಿತ್ತಿದ್ದಾರೆ. ಇದೇ ವೇಳೆ, ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನಲ್ಲಿ ಟಿಕೆಟ್ ಬಿಸಿ ಜೋರಾಗಿದೆ. ಈ ಎಲ್ಲ ಬೆಳವಣಿಗೆಗಳ ಚಿತ್ರಣ ಇಂತಿದೆ.
ಯತ್ನಾಳ್, ಖೂಬಾಗೆ ಬಿಜೆಪಿಯಲ್ಲೇ ವಿರೋಧ
ವಿಜಯಪುರದ ಪಕ್ಷೇತರ ಎಂಎಲ್ಸಿ ಆಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬೀದರ್ ಜಿಲ್ಲೆ ಬಸವಕಲ್ಯಾಣದ ಜೆಡಿಎಸ್ ಶಾಸಕರಾಗಿದ್ದ ಮಲ್ಲಿಕಾರ್ಜುನ ಖೂಬಾ ಸೇರಿ ನಾಲ್ವರು ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರಿದ್ದಾರೆ. ಯತ್ನಾಳ್, ಖೂಬಾ ಸೇರ್ಪಡೆ ವಿರೋಧಿಸಿ ವಿಜಯಪುರ, ಬೆಂಗಳೂರಲ್ಲಿ ಪ್ರತಿಭಟನೆ ನಡೆದಿವೆ.