ಲೋಕಸಭೆ ಚುನಾವಣೆ ಗೆಲ್ಲಲು ರೆಡಿ ಆಯ್ತು ಬಿಜೆಪಿ ಮಾಸ್ಟರ್ ಪ್ಲಾನ್!
ಪಂಚರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಅನಿರೀಕ್ಷಿತ ಸೋಲುಂಡ ಬಿಜೆಪಿ ಎಚ್ಚೆತ್ತುಕೊಂಡಿದೆ. ವಿಧಾನಸಭಾ ಚುನಾವಣೆಗಳಲ್ಲಿ ಎದುರಿಸಿರುವ ಪರಿಸ್ಥಿತಿ ಮತ್ತೊಮ್ಮೆ ತಲೆದೋರಬಾರದೆಂಬ ನಿಟ್ಟಿನಲ್ಲಿ ರೆಡಿಯಾಗುತ್ತಿರುವ ಕಮಲ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲಾ ತಯಾರಿ ನಡೆಸಿದೆ.
ನವದೆಹಲಿ[ಡಿ.14]: 2019ರ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಮುಂದಿನ ವರ್ಷದ ಜನವರಿ 11-12ರಂದು ಎರಡು ದಿನಗಳ ರಾಷ್ಟ್ರೀಯ ಮಂಡಳಿ ಸಭೆ ಸೇರಿದಂತೆ ರಾಷ್ಟ್ರಾದಾದ್ಯಂತ ಪಕ್ಷದ ವಿವಿಧ ಘಟಕಗಳ ಜೊತೆ ಬಿಜೆಪಿ ಸರಣಿ ಸಭೆ ನಡೆಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಗುರುವಾರ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಅವರು, ‘ರಾಷ್ಟ್ರಾದ್ಯಂತ ಬಿಜೆಪಿ ವಿವಿಧ ಸಭೆಗಳನ್ನು ಹಮ್ಮಿಕೊಳ್ಳಲಿದೆ. ಅವುಗಳಲ್ಲಿ ಜ.19-20ರಂದು ನಾಗ್ಪುರದಲ್ಲಿ ನಿಗದಿಯಾಗಿರುವ ಪರಿಶಿಷ್ಟಜಾತಿ ಮೋರ್ಚಾ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ,’ ಎಂದು ಹೇಳಿದ್ದಾರೆ
ಅಲ್ಲದೆ, ಫೆ.2-3ರಂದು ಭುವನೇಶ್ವರದಲ್ಲಿ ಪರಿಶಿಷ್ಟಪಂಗಡ ಮೋರ್ಚಾ, ಫೆ.15-16ರಂದು ಪಟನಾದಲ್ಲಿ ಇತರೆ ಹಿಂದುಳಿದ ಮೋರ್ಚಾ ಸೇರಿದಂತೆ ಇತರ ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಯಾದವ್ ಅವರು ಮಾಹಿತಿ ನೀಡಿದರು.