'ಬರದ ಕುರಿತು ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ'
ಬರದ ಕುರಿತು ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ: ನಾಡಗೌಡ| ಸಿಎಂ ಗ್ರಾಮವಾಸ್ತವ್ಯ ಮಾಡ್ತಾರೆಂದಾಗ ಬರ ನೆನಪಾಯ್ತು| ವಿರುದ್ಧ ಹರಿಹಾಯ್ದ ಸಿಂಧನೂರು ಶಾಸಕ
ರಾಯಚೂರು[ಜೂ.10]: ಇಷ್ಟು ದಿನಗಳ ಕಾಲ ಸುಮ್ಮನಿದ್ದ ಬಿಜೆಪಿಯವರಿಗೆ ಬರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಸಿಎಂ ಗ್ರಾಮ ವಾಸ್ತವ್ಯ ಮಾಡುವುದಾಗಿ ಘೋಷಿಸಿದ ಬೆನ್ನಲ್ಲಿಯೇ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರ ನನೆಪಿಗೆ ಬಂದಿದೆ. ಅದಕ್ಕಾಗಿ ಬಿಎಸ್ವೈ ಬರ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ ನಾಡಗೌಡ ದೂರಿದರು.
ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಿಲ್ಲವೆಂದು ಆರೋಪಿಸುವ ಬಿಜೆಪಿಯವರು ಕೇಂದ್ರದಿಂದ ರಾಜ್ಯಕ್ಕೆ ಕೂಲಿ ಹಣವನ್ನು ಬಿಡುಗಡೆಗೊಳಿಸುವ ಪ್ರಯತ್ನ ಮಾಡಿಲ್ಲ. ಬರ, ನರೇಗಾದ ಕುರಿತು ರಾಜ್ಯ ಸರ್ಕಾರದ ವಿರುದ್ಧ ಟೀಕಿಸುವ ಬಿಜೆಪಿಗರು ಮೊದಲು ನರೇಗಾದಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸುಮಾರು .15 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿಸಲಿ ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷ ಇದೆ ಎಂದು ಬಿ.ಎಸ್. ಯಡಿಯೂರಪ್ಪ ಬರದ ಹೆಸರಲ್ಲಿ ಪ್ರವಾಸ ಮಾಡುತ್ತಿರುವುದು ಸ್ವಾಗತಿಸುತ್ತೇನೆ. ಪ್ರಬಲ ವಿರೋಧ ಪಕ್ಷದ ನಾಯಕರಾಗಿ ನಮ್ಮನ್ನು ಎಚ್ಚರಿಸಲು ಮುಂದಾಗಿದ್ದಕ್ಕೆ ಅವರಿಗೆ ಅಭಿನಂದನೆಗಳು ಎಂದು ವ್ಯಂಗ್ಯ ಮಾಡಿದರು.