ಮೋದಿಗೆ ಸಲ್ಯೂಟ್ ಹೊಡೆಯುತ್ತೇನೆ ಎಂದ ಕೇಜ್ರಿವಾಲ್ ಮಾತಿಗೆ ಬಿಜೆಪಿ ಗರಂ ಆಗಿರುವುದೇಕೆ?
ನವದೆಹಲಿ(ಅ. 04): ಭಾರತೀಯ ಸೇನೆ ಸರ್ಜಿಕಲ್ ಕಾರ್ಯಾಚರಣೆ ನಡೆಸಿಯೇ ಇಲ್ಲ ಎಂದು ಪಾಕಿಸ್ತಾನ ಮಾಡುತ್ತಿರುವ ವಾದಕ್ಕೆ ನಿನ್ನೆ ಅರವಿಂದ್ ಕೇಜ್ರಿವಾಲ್ ನೀಡಿದ ಪ್ರತಿಕ್ರಿಯೆ ಹಲವರ ಹುಬ್ಬೇರಿಸಿದೆ. ಸರ್ಜಿಕಲ್ ಸ್ಟ್ರೈಕ್'ಗೆ ಆದೇಶ ನೀಡುವ ಎದೆಗಾರಿಕೆ ತೋರಿದ ಮೋದಿಗೆ ತಾನು ಸಲ್ಯೂಟ್ ಹೊಡೆಯುತ್ತೇನೆಂದು ಹೇಳಿದ್ದ ಕೇಜ್ರಿವಾಲ್, ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಕ್ಕೆ ಪುರಾವೆ ತೋರಿಸಿ ಪಾಕಿಸ್ತಾನದ ಬಾಯಿ ಮುಚ್ಚಿಸಿ ಎಂದು ಮೋದಿಗೆ ಮನವಿ ಮಾಡಿಕೊಂಡಿದ್ದರು. ಸೇನಾ ಕಾರ್ಯಾಚರಣೆಗೆ ಪುರಾವೆ ತೋರಿಸಿ ಎಂದ ಕೇಜ್ರಿವಾಲ್ ಮಾತು ಇದೀಗ ಬಿಜೆಪಿಯನ್ನು ಕೆರಳಿಸಿದೆ. ಸೇನೆಯ ಉತ್ಸಾಹಕ್ಕೆ ತಣ್ಣೀರೆರಚುವಂತಹ ಕೆಲಸ ಮಾಡದಿರಿ ಎಂದು ಕೇಜ್ರಿವಾಲ್'ಗೆ ಬಿಜೆಪಿ ಬುದ್ಧಿ ಹೇಳಿದೆ.
"ಮಿಸ್ಟರ್ ಕೇಜ್ರಿವಾಲ್, ಪಾಕಿಸ್ತಾನೀ ಮಾಧ್ಯಮದಲ್ಲಿ ಇವತ್ತು ನೀವು ಹೆಡ್'ಲೈನ್ ಆಗಿದ್ದೀರಿ. ರಾಜಕಾರಣವೇ ಬೇರೆ. ಆದರೆ, ನಮ್ಮ ಸೇನೆಗಳ ಉತ್ಸಾಹ ಕುಗ್ಗಿಸುವ ಯಾವುದೇ ಕಾರ್ಯ ಮಾಡಬೇಡಿ ಅಥವಾ ಮಾತುಗಳನ್ನಾಡಬೇಡಿ" ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.