ಅಟಲ್ ಅಸ್ಥಿ ಜಗಳ: ವಾಜಪೇಯಿ ಸಂಬಂಧಿ ವಿರುದ್ಧವೇ ಬಿಜೆಪಿ ಗರಂ!
ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ವಿಸರ್ಜನೆ! ವಿವಾದದ ಕಿಡಿ ಹೊತ್ತಿಸಿದ ರಾಜಕೀಯ ಆರೋಪ-ಪ್ರತ್ಯಾರೋಪ! ಲೋಕಸಭೆ ಚುನಾವಣೆ ಲಾಭಕ್ಕಾಗಿ ಬಿಜೆಪಿಯಿಂದ ಅಟಲ್ ಅಸ್ಥಿ ಬಳಕೆ! ಅಟಲ್ ಸಂಬಂಧಿ ಕರುಣಾ ಶುಕ್ಲಾ ಗಂಭೀರ ಆರೋಪ! ಕಾಂಗ್ರೆಸ್ ಮಾತಿಗೆ ಮರುಳಾಗಬೇಡಿ ಎಂದು ಬಿಜೆಪಿ ಪ್ರತ್ಯುತ್ತರ
ಶಿಲ್ಲಾಂಗ್(ಆ.25): ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅಟಲ್ ಬಿಹಾರಿ ವಾಜಪೇಯಿ ಅಜಾತಶತ್ರು ಎಂದೇ ಹೆಸರು ಗಳಿಸಿದ್ದವರು. ಅಟಲ್ ಜೀವಂತವಿದ್ದಾಗ ಎಂದೂ ವಿವಾದಕ್ಕೆ ಈಡಾಗಿರಲಿಲ್ಲ. ಆದರೆ ವಿಧಿಯ ವಿಪರ್ಯಾಸ ನೋಡಿ ವಾಜಪೇಯಿ ನಿಧನರಾದ ಮೇಲೆ ರಾಜಕೀಯ ಪಕ್ಷಗಳು ಅವರನ್ನು ವಿವಾದದ ಕೇಂದ್ರ ಬಿಂದುವನ್ನಾಗಿಸಿದ್ದಾರೆ.
ಹೌದು, ಅಟಲ್ ಬಿಹಾಋಇ ವಾಜಪೇಯಿ ಅಸ್ಥಿಯನ್ನು ದೇಶದ ಎಲ್ಲಾ ಪ್ರಮುಖ ನದಿಗಳಲ್ಲಿ ವಿಸರ್ಜಿಸುವ ಕೇಂದ್ರದ ನಿರ್ಧಾರ ಇದೀಗ ವಿವಾದ ಸೃಷ್ಟಿಸಿದೆ. ಇದು ಬಿಜೆಪಿಯ ಕೀಳು ರಾಜಕೀಯ ಎಂದು ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಇದೇ ಮಾತನ್ನು ವಾಜಪೇಯಿ ಸಂಬಂಧಿ ಕರುಣಾ ಶುಕ್ಲಾ ಕೂಡ ಆಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಾಜಪೇಯಿ ಅಸ್ಥಿಯನ್ನು ವಿಸರ್ಜಿಸುವ ನಾಟಕವಾಡುತ್ತಿದೆ ಎಂದು ಕರುಣಾ ಶುಕ್ಲಾ ಆರೋಪಿಸಿದ್ದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಪಕ್ಷ ರಾಜಕೀಯಕ್ಕಿಂತ ಮಿಗಿಲಾದ ವಾಜಪೇಯಿ ಅವರನ್ನು ಅವರ ಸಂಬಂಧಿಯೇ ಅವಮಾನಿಸುತ್ತಿರುವುದು ದುರದೃಷ್ಟಕರ ಎಂದು ಹರಿಹಾಯ್ದಿದೆ.
ವಾಜಪೇಯಿ ನಿಧನವನ್ನು ಕರುಣಾ ಶುಕ್ಲಾ ಅವರೇ ರಾಜಕೀಯಕರಣಗೊಳಿಸುತ್ತಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಕಾಂಗ್ರೆಸ್ ಮಾತನ್ನು ನಂಬಿರುವ ಶುಕ್ಲಾ, ತಮಗೆ ಅರಿವಿಲ್ಲದಂತೆ ವಾಜಪೇಯಿ ಅವರನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ಗುಡುಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ನಳಿನ್ ಕೊಹ್ಲಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವಿಚಾರದಲ್ಲಿ ಇಡೀ ದೇಶ ಒಂದಾಗಿದೆ. ಈ ಸಂದರ್ಭದಲ್ಲಿ ಅವರ ಸಂಬಂಧಿಯೇ ಈ ರೀತಿಯ ಕೀಳು ಆಪಾದನೆ ಮಾಡುತ್ತಿರುವುದು ಖೇದಕರ ಎಂದು ಹರಿಹಾಯ್ದಿದ್ದಾರೆ.