ದ್ವಿ ಚಕ್ರವಾಹನ ಸವಾರರೇ ಎಚ್ಚರ! ಇನ್ನು ಮುಂದೆ ನಗರ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುವಾಗ ದೋಷಪೂರಿತ ಸೈಲೆನ್ಸರ್ ಅಳವಡಿಸಿ ಕೊಂಡಿರುವುದು ಕಂಡು ಬಂದಲ್ಲಿ ದಂಡದ ಜತೆಗೆ ದ್ವಿ ಚಕ್ರವಾಹನದ ನೋಂದಣಿ ಪತ್ರ (ಆರ್‌ಸಿ) ಅಮಾನತು ಮಾಡಲಿದ್ದಾರೆ.

ಬೆಂಗಳೂರು : ದ್ವಿ ಚಕ್ರವಾಹನ ಸವಾರರೇ ಎಚ್ಚರ! ಇನ್ನು ಮುಂದೆ ನಗರ ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುವಾಗ ದೋಷಪೂರಿತ ಸೈಲೆನ್ಸರ್ ಅಳವಡಿಸಿ ಕೊಂಡಿರುವುದು ಕಂಡು ಬಂದಲ್ಲಿ ದಂಡದ ಜತೆಗೆ ದ್ವಿ ಚಕ್ರವಾಹನದ ನೋಂದಣಿ ಪತ್ರ (ಆರ್‌ಸಿ) ಅಮಾನತು ಮಾಡಲಿದ್ದಾರೆ.

Add Asianetnews Kannada as a Preferred SourcegooglePreferred

ದೋಷಪೂರಿತ ಸೈಲೆನ್ಸರ್ ಅಳವಡಿಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇನ್ನು ಮುಂದೆ ಅಂತಹ ದ್ವಿಚಕ್ರ ವಾಹನಗಳ ಆರ್.ಸಿ.ಯನ್ನು ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಗರದಲ್ಲಿ ಪ್ರತಿ ಬುಧವಾರ ಸಾರಿಗೆ ಇಲಾಖೆ ವಿಶೇಷ ತಂಡಗಳು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ದಂಡ ವಿಧಿಸುತ್ತಿದ್ದಾರೆ ಇದೀಗ ದಂಡದ ಜತೆಗೆ ದ್ವಿಚಕ್ರ ವಾಹನದ ನೋಂದಣಿ ಪತ್ರ ಅಮಾನತುಗೊಳಿಸುವುದಾಗಿ ಸಾರಿಗೆ ಇಲಾಖೆ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದ್ವಿಚಕ್ರ ವಾಹನಗಳಿಗೆ ದೋಷಪೂರಿತ ಸೈಲೆನ್ಸರ್ ಅಳವಡಿಸುವುದು ತಪ್ಪು. ಅದೇ ರೀತಿ ಗ್ಯಾರೇಜ್‌ಗಳಲ್ಲಿ ಸೈಲೆನ್ಸರ್‌ಗಳನ್ನು ಮಾರ್ಪಾಡು ಮಾಡುವುದೂ ಅಷ್ಟೇ ತಪ್ಪು. ಹಾಗಾಗಿ ಇಂತಹ ಕೆಲಸದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

5 ಲಕ್ಷ ದಂಡ ವಸೂಲಿ: ಕಳೆದ ವಾರ ನಗರ ವ್ಯಾಪ್ತಿಯಲ್ಲಿ ಸಾರಿಗೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ವಾಣಿಜ್ಯ ಸರಕು ಸಾಗಾಣೆ ಮಾಡಿದ 160 ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, 5 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. ನೆಲಮಂಗಲ ಟೋಲ್, ಕುಣಿಗಲ್ ರಸ್ತೆ, ಮಡಿವಾಳ, ದೇವನಹಳ್ಳಿ ಮತ್ತು ಕೆ.ಆರ್.ಪುರ ರಸ್ತೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು, 370ಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣ ಹಾಗೂ ನಿರುದ್ಯೋಗಿ ಮಹಿಳೆಯರಿಗೆ

ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ 100 ಮಹಿಳೆಯರಿಗೆ ಉಚಿತವಾಗಿ ಲಘುವಾಹನ ಚಾಲನಾ ತರಬೇತಿ ಕೊಡಿಸಲು 18.90 ಲಕ್ಷ ರು. ಅನುದಾನ ನೀಡಲಾಗಿದೆ. ಧಾರವಾಡ ಮತ್ತು ಬೆಂಗಳೂರಿನ ಚಾಲನಾ ತರಬೇತಿ ಕೇಂದ್ರದಲ್ಲಿ ತಲಾ 50 ಮಹಿಳೆಯರಿಗೆ 30 ದಿನಗಳ ತರಬೇತಿ ನೀಡುವುದರ ಜೊತೆಗೆ ಚಾಲನಾ ಪರವಾನಗಿ ನೀಡಲಾಗುವುದು ಹೇಳಿದರು.

ಇನ್ನು ಅದೇ ರೀತಿ 200 ಮಂದಿ ಪರಿಶಿಷ್ಟ ಅಭ್ಯರ್ಥಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲು ಬಜೆಟ್‌ನಲ್ಲಿ 2.50 ಕೋಟಿ ರು. ಅನುದಾನ ನೀಡಲಾಗಿದೆ. ತರಬೇತಿ ಬಳಿಕ ವಾಹನ ಖರೀದಿಗೆ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮ ಮತ್ತು ಕರ್ನಾಟಕ ರಾಜ್ಯ ಆರ್ಥಿಕ ನಿಗಮದಿಂದ ಶೂನ್ಯ ಬಡ್ಡಿ ದರಲ್ಲಿ 15 ಲಕ್ಷ ರು. ಸಾಲ ನೀಡುವ ಯೋಜನೆಯನ್ನೂ ಘೋಷಿಸಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.