ಭ್ರಷ್ಟಾಚಾರದ ವಿರುದ್ಧ ನಿತೀಶ್ ಕುಮಾರ್ ಗುಡುಗು: ತೇಜಸ್ವಿ ಯಾದವ್ ರಾಜಿನಾಮೆಗೆ ನಾಲ್ಕು ದಿನಗಳ ಡೆಡ್'ಲೈನ್!
ಬಿಹಾರದ ಆಡಳಿತರೂಢ ಮಹಾಮೈತ್ರಿ ಕೂಟ ಮುಸುಕಿನ ಗುದ್ದಾಟಕ್ಕೆ ಛಿದ್ರ ಛಿದ್ರ ಆಗುವ ಹಾಗಿದೆ. ಅಕ್ರಮ ಆಸ್ತಿ ಗಳಿಕೆಯ ಕಳಂಕಕ್ಕೆ ಗುರಿಯಾಗಿರೋ ಲಾಲೂ ಪುತ್ರ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆಗೆ ಒತ್ತಡ ಹೆಚ್ಚಿದೆ. ಈ ನಡುವೆ ಜೆಡಿಯು ನಾಲ್ಕು ದಿನಗಳ ಗಡುವು ನೀಡಿ ಮುಂದಿನ ಕಾರ್ಯತಂತ್ರ ರೂಪಿಸೋಕೆ ಸಿದ್ದವಾಗಿದೆ.
ಬಿಹಾರ(ಜು.13): ಬಿಹಾರದ ಆಡಳಿತರೂಢ ಮಹಾಮೈತ್ರಿ ಕೂಟ ಮುಸುಕಿನ ಗುದ್ದಾಟಕ್ಕೆ ಛಿದ್ರ ಛಿದ್ರ ಆಗುವ ಹಾಗಿದೆ. ಅಕ್ರಮ ಆಸ್ತಿ ಗಳಿಕೆಯ ಕಳಂಕಕ್ಕೆ ಗುರಿಯಾಗಿರೋ ಲಾಲೂ ಪುತ್ರ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆಗೆ ಒತ್ತಡ ಹೆಚ್ಚಿದೆ. ಈ ನಡುವೆ ಜೆಡಿಯು ನಾಲ್ಕು ದಿನಗಳ ಗಡುವು ನೀಡಿ ಮುಂದಿನ ಕಾರ್ಯತಂತ್ರ ರೂಪಿಸೋಕೆ ಸಿದ್ದವಾಗಿದೆ.
ಬಿಹಾರದಲ್ಲಿ ದೋಸ್ತಿಗಳ ನಡುವೆ ಮುಸುಕಿನ ಗುದ್ದಾಟ
ಬಿಹಾರದ ರಾಜಕೀಯ ಕುತೂಹಲದ ಘಟ್ಟ ತಲುಪಿದೆ. ಆರ್'ಜೆಡಿ-ಜೆಡಿಯು ಮೈತ್ರಿಯಲ್ಲಿ ಬಿರುಕು ಉಂಟಾಗಿದೆ. ಲಾಲೂ ಮಕ್ಕಳು ಹಾಗೂ ಆಪ್ತರ ಮನೆ ಮೇಲೆ ನಿರಂತರವಾಗಿ ಸಿಬಿಐ, ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದೆ. ಲಾಲೂ ಸಂಗವನ್ನೇ ತ್ಯಜಿಸಲು ನಿತೀಶ್ ಕುಮಾರ್ ಚಿಂತನೆ ನಡೆಸಿದ್ದಾರೆ.
ಜೆಡಿಯು ನಾಯಕ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಲಾಲೂ ಕುಟುಂಬದವರ ಮೇಲಿನ ಸಿಬಿಐ, ಇಡಿ, ಐಟಿ ದಾಳಿಯೇ ದೊಡ್ಡದಾಗಿ ಚರ್ಚೆಯಾಯಿತು. ಹೀಗಾಗಿ ತೇಜಸ್ವಿ ಯಾದವ್'ರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂತು.
ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಯಾದವ್ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದಿದ್ದಾರೆ. ಅಲ್ಲದೆ ಇದೆಲ್ಲಾ ಬಿಜೆಪಿ ಕುತಂತ್ರ ಅಂತ ಆರೋಪಿಸಿದ್ದಾರೆ.\
ನನ್ನ ವಿರುದ್ಧದ ಆರೋಪ ರಾಜಕೀಯ ಪ್ರೇರಿತ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ನನಗೆ ಆಗಿನ್ನೂ 14-15 ವರ್ಷ, ಮೀಸೆಯೂ ಬಂದಿರಲಿಲ್ಲ. ಇದೆಲ್ಲ ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಹೂಡಿರುವ ರಾಜಕೀಯ ಸಂಚು
- ತೇಜಸ್ವಿ ಯಾದವ್, ಬಿಹಾರದ ಉಪಮುಖ್ಯಮಂತ್ರಿ
ಈ ಮಧ್ಯೆ ಜೆಡಿಯು, ಆರ್ಜೆಡಿ ಜೊತೆಗಿನ ನಂಟು ಕಡಿದುಕೊಂಡ್ರೆ ಜೆಡಿಯು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಾವು ಸಿದ್ಧ ಎಂದು ಬಿಜೆಪಿ ಘೋಷಿಸಿದೆ. ಒಟ್ಟಾರೆ ಬಿಹಾರದಲ್ಲಿ ಸದ್ಯದಲ್ಲಿಯೇ ಮಹಾಮೈತ್ರಿ ಮುರಿದು ಬೀಳೋದಕ್ಕೆ ಕಾಲ ಸನ್ನಿಹಿತವಾದಂತೆ ಕಾಣುತ್ತಿದೆ.