ರಜೆ ಕೋರಿ ಪೇದೆ ಬರೆದ ಪತ್ರ ವೈರಲ್‌| ಸರ್ಕಾರದ ಆದೇಶದಂತೆ 4ನೇ ಶನಿವಾರ ರಜೆ ನೀಡುವಂತೆ ಪತ್ರ ಬರೆದಿದ್ದ ಚುಳಸಪ್ಪ

ಬೆಂಗಳೂರು[ಸೆ.28]: ರಾಜ್ಯ ಸರ್ಕಾರದ ಆದೇಶದಂತೆ 4ನೇ ಶನಿವಾರ ರಜೆ ಕೋರಿ ಸಂಚಾರ ಠಾಣೆ ಕಾನ್‌ಸ್ಟೇಬಲ್‌ವೊಬ್ಬರು ಬರೆದಿದ್ದಾರೆ ಎನ್ನಲಾದ ಪತ್ರ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪ್ಪಾರಪೇಟೆ ಸಂಚಾರ ಠಾಣೆ ಕಾನ್‌ಸ್ಟೇಬಲ್‌ ಚುಳಸಪ್ಪ ಕುಲಕರ್ಣಿ ಎಂಬುವರೇ ವಿವಾದಕ್ಕೀಡಾಗಿದ್ದು, ಈ ಪತ್ರದ ಕುರಿತು ಇಲಾಖಾ ಮಟ್ಟದ ವಿಚಾರಣೆ ನಡೆಸಿ ವರದಿ ನೀಡುವಂತೆ ಎಸಿಪಿ ಅವರಿಗೆ ಪಶ್ಚಿಮ ವಿಭಾಗದ ಡಿಸಿಪಿ (ಸಂಚಾರ) ಡಾ.ಸೌಮ್ಯಲತಾ ಆದೇಶಿಸಿದ್ದಾರೆ.

ಕರ್ತವ್ಯನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಸೌಮ್ಯಲತಾ ಅವರು, ‘ಠಾಣಾಧಿಕಾರಿಗೆ ರಜೆ ಕೋರಿ ಕಾನ್‌ಸ್ಟೇಬಲ್‌ ಕುಲಕರ್ಣಿ ಪತ್ರ ಸಲ್ಲಿಸಿಲ್ಲ. ಠಾಣಾಧಿಕಾರಿಗೆ ಸಲ್ಲಿಕೆಗೆ ಮುನ್ನವೇ ಅವರು ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗವಾಗಿದೆ. ಇದರಿಂದ ಗೊಂದಲ ಉಂಟಾಗಿದೆ. ಈ ಬಗ್ಗೆ ಎಸಿಪಿ ವರದಿ ನೀಡಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ’ ಎಂದರು.

ಅಂದು ಟ್ರಕ್; ಇಂದು ಬಸ್ ಚಾಲಕನ ಮೇಲೆ ಟ್ರಾಫಿಕ್ ಪೊಲೀಸಪ್ಪನ ಅಟ್ಟಹಾಸ!

2019ರ ಆ.13ರಂದು ರಾಜ್ಯ ಸರ್ಕಾರ ನೌಕರರಿಗೆ ತಿಂಗಳ 2 ಮತ್ತು 4ನೇ ಶನಿವಾರ ರಜೆ ಘೋಷಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಶಿವಕುಮಾರ್‌ ಆದೇಶಿಸಿದ್ದರು. ಅದರಂತೆ ತನಗೆ ರಜೆ ನೀಡುವಂತೆ ಶನಿವಾರ ಠಾಣಾಧಿಕಾರಿಗೆ ಕಾನ್‌ಸ್ಟೇಬಲ್‌ ಕುಲಕರ್ಣಿ ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗವಾಗಿದೆ. ಈ ಪತ್ರದ ಜತೆ ರಜೆ ಸಂಬಂಧದ ಸರ್ಕಾರದ ಸುತ್ತೋಲೆಯನ್ನೂ ಲಗತ್ತಿಸಿರುವುದಾಗಿ ಪತ್ರದಲ್ಲಿ ಉಲ್ಲೇಖವಾಗಿತ್ತು. ತಿಂಗಳ ಶನಿವಾರ ರಜೆ ನಿಮಯವು ಶಿಕ್ಷಕರು ಹಾಗೂ ಪೊಲೀಸರ ಹೊರತುಪಡಿಸಿ ಸರ್ಕಾರದ ಇತರೆ ನೌಕರರಿಗೆ ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.