ಬೆಂಗಳೂರಿನ ಕೃಷಿ ಸಂಶೋಧನಾ ಸಂಸ್ಥೆ- ಐಸಿಎಆರ್‌ ಸಿದ್ಧಪಡಿಸಿದ ‘ಕಿಸಾನ್‌ ಗಾಂಧಿ’ ಸ್ತಬ್ಧ ಚಿತ್ರ ಗಣರಾಜ್ಯೋತ್ಸವ ಪರೇಡ್‌ ವೇಳೆ ಇಲಾಖಾವಾರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ನವದೆಹಲಿ (ಜ. 29): ಬೆಂಗಳೂರಿನ ಕೃಷಿ ಸಂಶೋಧನಾ ಸಂಸ್ಥೆ- ಐಸಿಎಆರ್‌ ಸಿದ್ಧಪಡಿಸಿದ ‘ಕಿಸಾನ್‌ ಗಾಂಧಿ’ ಸ್ತಬ್ಧ ಚಿತ್ರ ಗಣರಾಜ್ಯೋತ್ಸವ ಪರೇಡ್‌ ವೇಳೆ ಇಲಾಖಾವಾರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೃಷಿ ಹಾಗೂ ಜಾನುವಾರು ಉತ್ತೇಜನಕ್ಕೆ ಗಾಂಧೀಜಿ ಅವರ ದೃಷ್ಟಿಕೋನ ಆಧರಿಸಿದ ‘ಮಿಶ್ರಿತ್‌ ಖೇತಿ, ಖುಷಿಯೊಂಕಿ ಖೇತಿ’ (ಮಿಶ್ರ ಬೇಸಾಯ)ದ ಬಗ್ಗೆ ಮಾಹಿತಿ ನೀಡುವ ಟ್ಯಾಬ್ಲೊವನ್ನು ಐಸಿಎಆರ್‌ ಸಿದ್ಧಪಡಿಸಿತ್ತು. ಸ್ವದೇಶಿ ಬೀಜಗಳು ಹಾಗೂ ಜಾನುವಾರು ಆಧಾರಿತ ಕೃಷಿಯ ಮಹತ್ವವನ್ನು ಟ್ಯಾಬ್ಲೊದಲ್ಲಿ ಬಿತ್ತರಿಸಲಾಗಿತ್ತು.

Add Asianetnews Kannada as a Preferred SourcegooglePreferred

ಈ ಟ್ಯಾಬ್ಲೋದಲ್ಲಿ ಗಾಂಧೀಜಿ ಅವರು ಕುರಿಗಳು ಮತ್ತು ಗೋವಿನ ಜೊತೆ ನಿಂತಿರುವ ದೃಶ್ಯವಿದೆ. ಪತ್ನಿ ಕಸ್ತೂರಬಾ ಅವರು ಚರಕವನ್ನು ನೇಯುವುದರಲ್ಲಿ ತೊಡಗಿಕೊಂಡಿರುವ ಮತ್ತು ಮಹಾರಾಷ್ಟ್ರದ ನಾಗ್ಪುರ ಸಮೀಪದ ವಾರ್ಧಾ ಆಶ್ರಮದಲ್ಲಿರುವ ಬಾಪು ಕುಟಿಯಲ್ಲಿ ಜಾನುವಾರುಗಳನ್ನು ಆರೈಕೆ ಮಾಡುತ್ತಿರುವ ದೃಶ್ಯವನ್ನೂ ತೋರಿಸಲಾಗಿದೆ.

ಸ್ವದೇಶಿ ತಳಿಗಳನ್ನು ಉತ್ತೇಜಿಸುವ, ಸಾವಯವ ಕೃಷಿ ಮತ್ತು ಮತ್ತು ಉತ್ತಮ ಆರೋಗ್ಯಕ್ಕಾಗಿ ಕುರಿ ಹಾಲು ಎಂಬ ಗಾಂಧೀಜಿ ಅವರ ತತ್ವವನ್ನು ಟ್ಯಾಬ್ಲೋ ಒಳಗೊಂಡಿದೆ. 1927ರಲ್ಲಿ ಬೆಂಗಳೂರಿನ ಐಸಿಎಆರ್‌ ಸಂಸ್ಥೆಯಲ್ಲಿ 15 ದಿನಗಳ ಕಾಲ ಹೈನುಗಾರಿಕೆಯ ತರಬೇತಿಯನ್ನು ಗಾಂಧೀಜಿ ಅವರು ಪಡೆದುಕೊಂಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.