ಸರಳವಾಗಿ ಗೃಹಪ್ರವೇಶ ಆಚರಿಸಿ ಸಂತ್ರಸ್ತರಿಗೆ ಹಣ ನೀಡಿದ ಬೆಂಗಳೂರು ದಂಪತಿ  | ಉಡುಗೊರೆ ಸಂತ್ರಸ್ತರಿಗೆ ಕೊಡಿ ಎಂದು ಆಹ್ವಾನ ಪತ್ರಿಕೆಯಲ್ಲಿ ಮನವಿ | 

ಬೆಂಗಳೂರು (ಆ. 16): ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗಲು ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಹೊಸ ಮನೆಯ ಅದ್ಧೂರಿ ಗೃಹಪ್ರವೇಶವನ್ನೇ ರದ್ದುಗೊಳಿಸಿದ್ದಾರೆ. ಸರಳವಾಗಿ ಪೂಜೆ ನೆರವೇರಿಸಿ, ಉಳಿತಾಯವಾಗುವ ಹಣ ಹಾಗೂ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಲು ಉದ್ದೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರಾವಳಿ ಹೊರತುಪಡಿಸಿ ಉಳಿದೆಡೆ ಮಳೆ ಕ್ಷೀಣ

ಈ ಸಂಬಂಧ ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಿರುವ ಅವರು, ತಮಗೆ ನೀಡುವ ಉಡುಗೊರೆಗಳನ್ನು ಸಂತ್ರಸ್ತರಿಗೆ ಕೊಡುವಂತೆ ಸಂಬಂಧಿಕರು, ಸ್ನೇಹಿತರಲ್ಲಿ ವಿನಯಪೂರ್ವಕವಾಗಿ ಮನವಿ ಮಾಡಿದ್ದಾರೆ.

ವಿಜಯನಗರದ ಫ್ಲವರ್‌ ಡೆಕೊರೇಟರ್‌ ಆದ ಶೇಖರ್‌ ಹಾಗೂ ಮಹೇಶ್ವರಿ ಶೇಖರ್‌ ದಂಪತಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಲು ತಮ್ಮ ಗೃಹ ಪ್ರವೇಶ ಕಾರ್ಯಕ್ರಮವನ್ನೇ ರದ್ದುಗೊಳಿಸಿರುವುದು ವಿಶೇಷ. ಗೃಹ ಪ್ರವೇಶವನ್ನು ತೀರಾ ಸರಳವಾಗಿ ಆಚರಿಸುವ ಮುಖೇನ ಅದರಿಂದ ಉಳಿತಾಯವಾಗುವ ವೆಚ್ಚ ಹಾಗೂ ಶುಭ ಕಾರ್ಯಕ್ಕೆ ಬೇಕಾಗುವ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ನೀಡಲು ಉದ್ದೇಶಿಸಿದ್ದಾರೆ. ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ತಮಗೆ ನೀಡಲು ಬಯಸಿರುವ ಕಾಣಿಕೆಗಳು, ಉಡುಗೊರೆಗಳನ್ನು ಸಂತ್ರಸ್ತರಿಗೆ ನೀಡಲು ಮನವಿ ಮಾಡಿದ್ದಾರೆ.

ಪರಿಹಾರ ಕೇಂದ್ರಗಳಾದ ಶಾಲೆಗಳು : ಆಗಸ್ಟ್ 20ರವರೆಗೆ ರಜೆ ವಿಸ್ತರಣೆ

‘ನಾನು ಚಂದ್ರ ಲೇಔಟ್‌ನಲ್ಲಿ ಕಳೆದ 10 ವರ್ಷಗಳಿಂದ ಫ್ಲವರ್‌ ಡೆಕೊರೇಷನ್‌ ಕೆಲಸ ಮಾಡುತ್ತಿದ್ದೇನೆ. ಗಂಗೊಂಡನಹಳ್ಳಿಯಲ್ಲಿ ಚಿಕ್ಕದಾದ ಮನೆ ನಿರ್ಮಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿನ ಜಲಯ ಪ್ರಳಯ ಕಂಡು ತುಂಬಾ ಬೇಜಾರಾಯ್ತು. ಅಲ್ಲಿನ ಜನರು ಸಂಕಷ್ಟದಲ್ಲಿರುವಾಗ ನಾವು ಗೃಹ ಪ್ರವೇಶವನ್ನು ಅದ್ಧೂರಿಯಾಗಿ ಆಚರಿಸುವುದು ಸರಿಯಲ್ಲವೆಂದು ರದ್ದುಗೊಳಿಸಿದ್ದೇವೆ. ಸರಳವಾಗಿ ಪೂಜೆ ನೆರವೇರಿಸಲಾಗುವುದು. ಕೆಲವರು ಯಾಕೆ ಕಾರ್ಯ ಮಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಮಗೆ ನೀಡಬೇಕು ಎಂದುಕೊಂಡಿರುವುದನ್ನು ಮನಸ್ಸು ಪೂರ್ವಕವಾಗಿ ಸಂತ್ರಸ್ತರಿಗೆ ತಲುಪಿಸಿ ಎಂದು ಕೋರಿದ್ದೇವೆ’ ಎಂದು ಮನೆ ಮಾಲೀಕ ಶೇಖರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.