'ಮಗನ ಸೋಲಿನ ಭಯದಿಂದ ಯಡಿಯೂರಪ್ಪ ಶಿವಮೊಗ್ಗ ಬಿಟ್ಟು ಎಲ್ಲೂ ಹೋಗ್ಲಿಲ್ಲ'
ಇತ್ತೀಚೆಗೆ ಪ್ರಕಟಗೊಂಡ ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಫಲಿತಾಂಶದ ಬಗ್ಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದು ಹೀಗೆ.
ಶಿವಮೊಗ್ಗ, [ನ.11]: ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಫಲಿತಾಂಶದ ಬಳಿಕ ಬಿಎಸ್ ವೈ ಮಕಾಡೆ ಮಲಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು [ಭಾನುವಾರ] ಸುದ್ದಿಗಾರೊಂದಿಗೆ ಮಾತನಾಡಿದ ಬೇಳೂರು, ಬಳ್ಳಾರಿ ಬಿಜೆಪಿ ಕೋಟೆ ಈಗಾಗಲೇ ಛಿದ್ರವಾಗಿದ್ದು, ಮೈತ್ರಿಗೆ ಗೆಲುವು ಸಿಕ್ಕಿದೆ. ಮುಂದಿನ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಬಿಜೆಪಿ ಭದ್ರಕೋಟೆ ಛಿದ್ರ ಮಾಡುವುದು ಗ್ಯಾರಂಟಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.
ಮತದಾರರು ಮನಸ್ಸು ಮಾಡಿದರೆ ಮಧು ಗೆಲುವು ಸುಲಭ. ಬಿಎಸ್ ವೈ ಮತ್ತು ರಾಘವೇಂದ್ರ ಸೋಲಿಸುವರೆಗೆ ಮಲಗುವುದಿಲ್ಲ. ಬಿಎಸ್ ವೈ ಭಯದಿಂದ ಬೂತ್ ಮಟ್ಟಕ್ಕೆ ಹೋಗಿ ಪ್ರಚಾರ ಮಾಡಿದ್ದಾರೆ.
ಓರ್ವ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಗನ ಸೋಲಿನ ಭೀತಿ ಅವರಿಗೆ ಕಾಡುತ್ತಿತ್ತು. ಹೀಗಾಗಿ ಅವರು ಶಿವಮೊಗ್ಗ ಕ್ಷೇತ್ರ ಬಿಟ್ಟು ಎಲ್ಲಿ ಹೋಗಿರಲಿಲ್ಲ ಎಂದು ಹರಿಹಾಯ್ದರು.
ಶಿವಮೊಗ್ಗ ದಲ್ಲಿ ಬಿಎಸ್ ವೈ ಮತ್ತು ಬಿ. ವೈ ರಾಘವೇಂದ್ರ ಮಣಿಸಬೇಕೇಂದ್ರೆ ಮಧು ಬಂಗಾರಪ್ಪ ಅವರಿಗೆ ಕನಿಷ್ಠ ಆರು ತಿಂಗಳು ಆದ್ರೂ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.