ಸಿಎಂ ಆಗುವ ಹಿಂದಿರುವ ಶಕ್ತಿ ಬಗ್ಗೆ ತಿಳಿಸಿದ ಎಚ್ ಡಿಕೆ
ತಾವು ಸಿಎಂ ಆಗಿರುವುದರ ಹಿಂದಿನ ಶಕ್ತಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ಆ ಶಕ್ತಿಯ ಕೃಪೆಯಿಂದಾಗಿಯೇ ತಾವು ಸಿಎಂ ಆಗಿದ್ದಾಗಿ ಅವರು ಹೇಳಿದ್ದಾರೆ.
ಕೊಚ್ಚಿ: ‘ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೃಪೆಯಿಂದಲೇ ನಾನು ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಅಲ್ಲದೆ, ತಾನೋರ್ವ ಅಯ್ಯಪ್ಪನ ಪರಮ ಭಕ್ತ ಎಂದೂ ಅವರು ಹೇಳಿಕೊಂಡರು.
ಕರ್ನಾಟಕ ಮುಖ್ಯಮಂತ್ರಿಯಾಗಿದ್ದಕ್ಕೆ ಕೇರಳದ ಜಾತ್ಯತೀತ ಜನತಾದಳ ಘಟಕದಿಂದ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಈ ಹಿಂದೆ ಕೇರಳ ಜಲ ಸಂಪನ್ಮೂಲ ಸಚಿವ ಮ್ಯಾಥ್ಯೂ ಟಿ. ಥಾಮಸ್ ಸೇರಿದಂತೆ ಇತರ ಮುಖಂಡರ ಜತೆಗೆ ಶಬರಿಮಲೆಗೆ ಹೋಗುತ್ತಿದ್ದದ್ದನ್ನು
ಅವರು ನೆನಪಿಸಿಕೊಂಡರು. ಅಲ್ಲದೆ, ‘2005 ರಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ 2006 ರಲ್ಲಿಯೇ ಮುಖ್ಯ ಮಂತ್ರಿಯಾದೆ’ ಎಂದು ಸ್ಮರಿಸಿದರು.
‘ಇದೀಗ ನಮ್ಮ ಪಕ್ಷಕ್ಕೆ ಬಹುಮತ ಸಿಗಲಿಲ್ಲವಾದರೂ, ಮುಖ್ಯಮಂತ್ರಿಯಾಗಿದ್ದೇನೆ ಎಂದರೆ, ಅದು ಅಯ್ಯಪ್ಪ ಸ್ವಾಮಿಯೇ ಕೃಪೆಯೇ ಕಾರಣ’ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಮತ್ತು ಕೇರಳ ಘಟಕದ ಜೆಡಿಎಸ್ ಮುಖಂಡರು ಇದ್ದರು.