ಪೌರಕಾರ್ಮಿಕರ ವೇತನ-ವೇದನೆ: ಮಂಗಳಾರತಿ ಮಾಡಿಸಿಕೊಂಡ ಬಿಬಿಎಂಪಿಯಿಂದ ಇಂದೇ ಸಂಬಳ
- ಸಂಬಳ ಸಿಗದೇ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಪೌರಕಾರ್ಮಿಕ ಸುಬ್ರಮಣಿ
- ಇನ್ಮುಂದೆ ಪ್ರತಿ ತಿಂಗಳು 7ನೇ ತಾರೀಕಿಗೆ ಪೌರಕಾರ್ಮಿಕರಿಗೆ ವೇತನ ಪಾವತಿ
ಬೆಂಗಳೂರು: ಪೌರಕಾರ್ಮಿಕರೊಬ್ಬರ ಆತ್ಮಹತ್ಯೆಯ ಬಳಿಕ ಭಾರೀ ಚರ್ಚೆಗೆ ಗ್ರಾಸವಾಗಿದ್ದ ವೇತನ ಬಾಕಿ ವಿಚಾರವು ಇದೀಗ ಬಗೆಹರಿಯುವ ಲಕ್ಷಣಗಳು ಗೋಚರಿಸಿವೆ.
ಬಿಬಿಎಂಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ, ಜೂನ್ ತಿಂಗಳವರೆಗೆ ಬಾಕಿ ಇರುವ ಎಲ್ಲಾ ವೇತನವನ್ನುಇಂದೇ ಪೌರಕಾರ್ಮಿಕರಿಗೆ ಪಾವತಿಸಲು ನಿರ್ಧರಿಸಲಾಗಿದೆ.
ಜತೆಗೆ, ಪ್ರತಿ ತಿಂಗಳು 1ನೇ ತಾರೀಕಿನಂದು ಬಯೋಮೆಟ್ರಿಕ್ ಹಾಜರಾತಿ ವಿವರಗಳನ್ನು ಡೌನ್ ಲೋಡ್ ಮಾಡಿಕೊಂಡು, 7 ನೇ ತಾರೀಕು ಅಥವಾ ಅದಕ್ಕಿಂತ ಮುಂಚೆಯೇ ವೇತವವನ್ನು ಕಾರ್ಮಿಕರ ಖಾತೆಗೆ ಜಮಾ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಾವಿಡೆಂಟ್ ಫಂಡ್ ಮತ್ತು ಇಎಸ್ಐಗೆ ಸಂಬಂಧಿಸಿರುವ ತಾಂತ್ರಿಕ ಅಡಚಣೆಗಳನ್ನು 3 ದಿನಗಳೊಳಗೆ ಬಗೆಹರಿಸುವುದಾಗಿ ಬಿಬಿಎಂಪಿ ಹೇಳಿದೆ.
7 ತಿಂಗಳುಗಳಿಂದ ವೇತನ ಸಿಗದೆ ಜೀವನ ನಿರ್ವಹಣೆ ಸಾಧ್ಯವಾಗದೆ ನೊಂದಿದ್ದ ಪಾಲಿಕೆ ಪೌರಕಾರ್ಮಿಕ ಸುಬ್ರಮಣಿ ಎಂಬವರು ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 18 ವರ್ಷಗಳಿಂದ ಸುಬ್ರಮಣಿ ಬಿಬಿಎಂಪಿಯಲ್ಲಿ ಸ್ವೀಪರ್ ಹಾಗೂ ಕಸಕೊಂಡೊಯ್ಯುವ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
"
ಒಂದು ಕಡೆ ಸುಬ್ರಮಣಿ ಆತ್ಮಹತ್ಯೆ ಬಳಿಕ ರೊಚ್ಚಿಗೆದ್ದಿದ್ದ ಪೌರಕಾರ್ಮಿಕರು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಬಿಬಿಎಂಪಿಯ ನಿರ್ಲಕ್ಷ್ಯತನವು ವ್ಯಾಪಕ ಟೀಕೆಗೊಳಗಾಗಿದೆ.
ಗುತ್ತಿಗೆ ಆಧಾರದಲ್ಲಿ ಕೆಲಸಮಾಡುತ್ತಿದ್ದ ಪೌರಕಾರ್ಮಿಕರಿಗೆ ಹೊಸವ್ಯವಸ್ಥೆಯಲ್ಲಿ ಬಿಬಿಎಂಪಿಯು ವೇತನಗಳನ್ನು ನೇರವಾಗಿ ಅವರ ಖಾತೆಗೆ ವರ್ಗಾಯಿಸುತ್ತಿದೆ. ಬೆಂಗಳೂರಿನಲ್ಲಿ ಸುಮಾರು 16 ರಿಂದ 20 ಸಾವಿರ ಪೌರಕಾರ್ಮಿಕರಿದ್ದು, ಕಳೆದ ಜನವರಿಯಿಂದ ಹಲವು ಮಂದಿಗೆ ವೇತನ ಪಾವತಿಯಾಗಿಲ್ಲ. ಈ ಬಗ್ಗೆ ತಾಂತ್ರಿಕ ಅಡಚಣೆಗಳನನ್ನು ಮುಂದಿಟ್ಟುಕೊಂಡು, ಬಿಬಿಎಂಪಿ ಅಧಿಕಾರಿಗಳು ಮತ್ತು ದಲ್ಲಾಳಿಗಳು ಕಿರುಕುಳ ನೀಡುತ್ತಿದ್ದಾರೆಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.