ಬಿಬಿಎಂಪಿ ಕಾಲ್'ಸೆಂಟರ್: 15 ದಿನದಲ್ಲಿ ಪೂರ್ಣಗೊಳಿಸಲು ಮೇಯರ್ ಸೂಚನೆ
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮೇಯರ್ ಪದ್ಮಾವತಿ, ಪಾಲಿಕೆ ಕೇಂದ್ರ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಕಟ್ಟಡದ 6ನೇ ಮಹಡಿಯಲ್ಲಿ ರು.5.80 ಕೋಟಿ ವೆಚ್ಚದಲ್ಲಿ ಕಾಲ್ಸೆಂಟರ್ ನಿರ್ಮಿಸಲಾಗುತ್ತಿದೆ. ಸರ್ಕಾರದ ಅನುಮೋದನೆಯಲ್ಲಿ ಆದ ವಿಳಂಬದಿಂದ ಯೋಜನೆ ವಿಳಂಬವಾಗಿದೆ. ಕೂಡಲೇ ಅನುಮತಿ ಪಡೆದು ಕಾಲ್ಸೆಂಟರ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಬೆಂಗಳೂರು: ಬಿಬಿಎಂಪಿ ವತಿಯಿಂದ ರು.5.80 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅತ್ಯಾಧುನಿಕ ನಿಯಂತ್ರಣ ಕೊಠಡಿಯನ್ನು (ಕಾಲ್ ಸೆಂಟರ್) 15 ದಿನಗಳೊಳಗಾಗಿ ಉದ್ಘಾಟನೆಗೆ ಸಿದ್ಧಗೊಳಿಸುವಂತೆ ಮೇಯರ್ ಜಿ.ಪದ್ಮಾವತಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಕಾಲ್'ಸೆಂಟರ್ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ನೂತನ ಕಾಲ್'ಸೆಂಟರ್ ಮೂಲಕ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಬಿಡಿಎ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆ ಗಳ ಬಗೆಗಿನ ದೂರುಗಳನ್ನು ಒಂದೇ ಸೂರಿನಡಿ ಸ್ವೀಕರಿಸಬಹುದಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಳೆಗಾಲ ಆರಂಭವಾಗಿದ್ದರೂ ಕಾಲ್ಸೆಂಟರ್ ಪ್ರಾರಂಭವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಅಧಿಕಾರಿಗಳು, ಯೋಜನೆಗೆ ರು.5.80 ಕೋಟಿ ಭಾರೀ ವೆಚ್ಚ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಅನುಮತಿ ಪಡೆಯ ಬೇಕಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಕಡತ ಕಳುಹಿಸಿ 2 ತಿಂಗಳಾದರೂ ಅನುಮೋದನೆ ದೊರೆಯಲಿಲ್ಲ. ಹೀಗಾಗಿ ಕಾಲ್ ಸೆಂಟರ್ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಮೇಯರ್ ಪದ್ಮಾವತಿ ಅವರು, ಕೂಡಲೇ ಸರ್ಕಾರದಿಂದ ಅನುಮತಿ ಪಡೆದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ವಿಶೇಷ ಆಯುಕ್ತ ವಿಜಯಶಂಕರ್ ಅವರಿಗೆ ಆದೇಶಿಸಿದರು. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮೇಯರ್ ಪದ್ಮಾವತಿ, ಪಾಲಿಕೆ ಕೇಂದ್ರ ಕಚೇರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಕಟ್ಟಡದ 6ನೇ ಮಹಡಿಯಲ್ಲಿ ರು.5.80 ಕೋಟಿ ವೆಚ್ಚದಲ್ಲಿ ಕಾಲ್ಸೆಂಟರ್ ನಿರ್ಮಿಸಲಾಗುತ್ತಿದೆ. ಸರ್ಕಾರದ ಅನುಮೋದನೆಯಲ್ಲಿ ಆದ ವಿಳಂಬದಿಂದ ಯೋಜನೆ ವಿಳಂಬವಾಗಿದೆ. ಕೂಡಲೇ ಅನುಮತಿ ಪಡೆದು ಕಾಲ್ಸೆಂಟರ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಬಿಬಿಎಂಪಿ ನಿರ್ಮಿಸುತ್ತಿರುವ ಕಾಲ್ ಸೆಂಟರ್ ಶೀಘ್ರ ಆರಂಭವಾದರೆ ಮಳೆ ಗಾಲದ ಅನಾಹುತ ನಿಭಾಯಿಸುವುದು ಸುಲಭ. ಈಗಾಗಲೇ 2 ಬಾರಿ ಕಾಲ್ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 15 ದಿನಗಳೊಳಗೆ ಕಾಲ್ಸೆಂಟರ್ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ.
- ಜಿ. ಪದ್ಮಾವತಿ, ಬಿಬಿಎಂಪಿ ಮೇಯರ್