ಲಿಂಗಾಯತ ಮಹಾಸಭಾಕ್ಕೆ ರಾಜೀನಾಮೆ : ಹೊರಟ್ಟಿ ಬೆದರಿಕೆ
ಲಿಂಗಾಯತರು ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಬಸವ ಧರ್ಮ ಪೀಠದ ಮಾತೆ ಮಹಾದೇವಿ ಕರೆ ನೀಡಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ, ಮಾಜಿ ಸಚಿವ ಬಸವರಾಜ್ ಹೊರಟ್ಟಿ ವಿರೋಧಿಸಿದ್ದಾರೆ. ಮಾತೆ ಮಹಾದೇವಿ ತಮ್ಮ ನಿಲುವು ಬದಲಿಸದಿದ್ದರೆ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಯಾದಗಿರಿ : ಲಿಂಗಾಯತರು ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಬಸವ ಧರ್ಮ ಪೀಠದ ಮಾತೆ ಮಹಾದೇವಿ ಕರೆ ನೀಡಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ, ಮಾಜಿ ಸಚಿವ ಬಸವರಾಜ್ ಹೊರಟ್ಟಿ ವಿರೋಧಿಸಿದ್ದಾರೆ. ಮಾತೆ ಮಹಾದೇವಿ ತಮ್ಮ ನಿಲುವು ಬದಲಿಸದಿದ್ದರೆ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ರಾಜಕೀಯ ರಹಿತವಾಗಿದ್ದು ಬೇಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಅಂದ ಮಾತ್ರಕ್ಕೆ ಲಿಂಗಾಯತರು ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಹೇಳುವುದನ್ನು ಒಪ್ಪಲಾಗದು ಎಂದರು.
ಒಂದು ವೇಳೆ ಮಾತೆ ಮಹಾದೇವಿ ನಿಲುವಿನಲ್ಲಿ ಬದಲಾವಣೆ ಬಾರದಿದ್ದರೆ ತಾವು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುವುದಾಗಿ ಹೊರಟ್ಟಿಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ. ಆದರೂ, ಆ ನಂತರ ಪ್ರಮುಖರೊಂದಿಗೆ ಮಾತನಾಡಿದೆ. ಲಿಂಗಾಯತರಿಗೆ ಯಾರು ಬೆಂಬಲ ವ್ಯಕ್ತಪಡಿಸಿದ್ದಾರೋ ಅವರಿಗೆ ಲಿಂಗಾಯತರು ಬೆಂಬಲಿಸಬೇಕು ಎಂದು ಹೇಳಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಮಾತೆ ಮಹಾದೇವಿ ಲಿಂಗಾಯತರು ಕಾಂಗ್ರೆಸ್ಗೆ ಬೆಂಬಲಿಸಬೇಕು ಎಂದು ಹೇಳಿದ್ದಾರೆಂದು ಗೊತ್ತಾಯಿತು.
ಬೆಂಗಳೂರಿಗೆ ವಾಪಸ್ ಹೋದ ನಂತರ ಬೆಳವಣಿಗೆ ಕುರಿತು ಸ್ವಾಮೀಜಿಗಳೊಂದಿಗೆ ಹಾಗೂ ಇತರೆ ನಾಯಕರೊಂದಿಗೆ ಮಾತನಾಡುತ್ತೇನೆ. ಒಂದು ವೇಳೆ ಮಾತೆ ಮಹಾದೇವಿ ನಿಲುವಿನಲ್ಲಿ ಬದಲಾವಣೆ ಬರದಿದ್ದರೆ ನಾನೇ ರಾಜೀನಾಮೆ ನೀಡಿ ಹೊರಬರುತ್ತೇನೆ ಎಂದು ಸ್ಪಷ್ಟಪಡಿಸಿದರು.