ಎಂಪಿ ಚುನಾವಣೆ ಸೋತರೆ ಸರ್ಕಾರ ವಿಸರ್ಜನೆ..?
ಮುಂದಿನ ಲೋಕಸಭೆ ಚುನಾವಣೆ ಸೋತರೆ ಕರ್ನಾಟಕದಲ್ಲಿ ರಚನೆಯಾಗಿರುವ ಸಮ್ಮಿಶ್ರ ಸರ್ಕಾರವನ್ನು ವಿಸರ್ಜನೆ ಮಾಡುತ್ತೀರಾ? ನಿಮಗೆ ಅಂತಹ ನೈತಿಕತೆ ಇದೆಯಾ ಎಂದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ಬೆಂಗಳೂರು : ಮುಂದಿನ ಲೋಕಸಭೆ ಚುನಾವಣೆ ಸೋತರೆ ಸರ್ಕಾರವನ್ನು ವಿಸರ್ಜನೆ ಮಾಡುತ್ತೀರಾ? ನಿಮಗೆ ಅಂತಹ ನೈತಿಕತೆ ಇದೆಯಾ ಎಂದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದರು.
ನಾನು ಜನರ ಹಂಗಿನಲ್ಲಿ ಇಲ್ಲ ಕಾಂಗ್ರೆಸ್ ಹಂಗಿನಲ್ಲಿದ್ದೇನೆ ಎಂದು ಒಮ್ಮೆ ಹೇಳಿದ್ದೀರಿ. ಮತ್ತೊಮ್ಮೆ ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ಹೇಳಿದ್ದೀರಿ. ಸಮ್ಮಿಶ್ರ ಸರ್ಕಾರಗಳು ರಾಜ್ಯಕ್ಕೆ ಹೊಸದಲ್ಲ. 1969ರಿಂದ ರಾಜ್ಯವು ಸಮ್ಮಿಶ್ರ ಸರ್ಕಾರಗಳನ್ನು ಕಂಡಿದೆ. 1984ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಸಮ್ಮಿಶ್ರ ಸರ್ಕಾರವು ಲೋಕಸಭೆ ಚುನಾವಣೆಯಲ್ಲಿ ಸೋತಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿತ್ತು. ಈ ಮೂಲಕ ಹೆಗಡೆ ಪ್ರಾಮಾಣಿಕತೆ ಹಾಗೂ ನೈತಿಕತೆ ತೋರಿದ್ದರು. ಈ ಲೋಕಸಭೆ ಚುನಾವಣೆಯಲ್ಲಿ ನೀವು ಸೋತರೆ ರಾಜೀನಾಮೆ ನೀಡುತ್ತೀರಾ ಎಂದು ಪ್ರಶ್ನಿಸಿದರು.
ಈ ವೇಳೆ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ ಸ್ಪೀಕರ್ ರಮೇಶ್ಕುಮಾರ್, ಅಂದು ರಾಮಕೃಷ್ಣ ಹೆಗಡೆ ಅವರ ಜತೆ ಎಸ್.ಆರ್. ಬೊಮ್ಮಾಯಿ ಅವರು ಇದ್ದರು. ಇಂದು ಕುಮಾರಸ್ವಾಮಿ ಅವರ ಜತೆ ಬಸವರಾಜ ಬೊಮ್ಮಾಯಿ ಇರುತ್ತೇನೆ ಎಂದರೆ ಕುಮಾರಸ್ವಾಮಿ ಅವರು ಮನಸ್ಸು ಮಾಡುತ್ತಾರೆ ಎಂದರು. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, (ನಗುತ್ತಾ) ಆಯ್ತು ಮಾಡೋಣ ಎಂದರು.