ನನಗೆ ತಿಳಿಸದೆಯೇ ಪಠ್ಯದಲ್ಲಿ ಬಳಸಿದ್ದಾರೆ: ಬರಗೂರು ರಾಮಚಂದ್ರಪ್ಪ ಕ್ಷಮೆಯಾಚನೆ
ಮಂಗಳೂರು ವಿವಿ ಪ್ರಸಾರಾಂಗ ಹೊರತಂದಿರುವ ಬಿಸಿಎ ಪದವಿಯ ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಯುದ್ಧ ಒಂದು ಉದ್ಯಮ’ ಗದ್ಯದಲ್ಲಿ ಸೈನಿಕರನ್ನು ಹೀನಾಯವಾಗಿ ಬಿಂಬಿಸುವ ವಿಚಾರಗಳು ಇರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಗದ್ಯದ ಕರ್ತೃ ಬರಗೂರು ರಾಮಚಂದ್ರಪ್ಪ ಅವರು ಸೈನಿಕರ ಕ್ಷಮೆ ಯಾಚಿಸಿದ್ದಾರೆ.
ಬೆಂಗಳೂರು(ಆ.10): ಮಂಗಳೂರು ವಿವಿ ಪ್ರಸಾರಾಂಗ ಹೊರತಂದಿರುವ ಬಿಸಿಎ ಪದವಿಯ ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಯುದ್ಧ ಒಂದು ಉದ್ಯಮ’ ಗದ್ಯದಲ್ಲಿ ಸೈನಿಕರನ್ನು ಹೀನಾಯವಾಗಿ ಬಿಂಬಿಸುವ ವಿಚಾರಗಳು ಇರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಗದ್ಯದ ಕರ್ತೃ ಬರಗೂರು ರಾಮಚಂದ್ರಪ್ಪ ಅವರು ಸೈನಿಕರ ಕ್ಷಮೆ ಯಾಚಿಸಿದ್ದಾರೆ.
ತಮ್ಮ ಗದ್ಯ ವಿವಾದಕ್ಕೀಡಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಬರಗೂರು ರಾಮಚಂದ್ರಪ್ಪ, ‘ನನ್ನ ಲೇಖನದಿಂದ ನೋವಾಗಿದ್ದರೆ ಸೈನಿಕರ ಕ್ಷಮೆ ಕೇಳುತ್ತೇನೆ. ಸೈನಿಕರನ್ನು ಅತ್ಯಾಚಾರಿ ಎಂದು ಹೇಳಿದರೆ ಅದು ತನ್ನನ್ನು ತಾನೇ ಅವಮಾನ ಮಾಡಿಕೊಂಡಂತೆ. ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವ ಉದ್ದೇಶದಿಂದ ಈ ಲೇಖನ ಬರೆದಿಲ್ಲ. ನನ್ನ ಸ್ನೇಹಿತ ಯೋಧನೊಬ್ಬ ನೀಡಿದ್ದ ಮಾಹಿತಿ ಆಧರಿಸಿ ಗಡಿ ಕಾಯುವ ಸಂದರ್ಭದಲ್ಲಿ ಸೈನಿಕರಿಗೆ ಕಾಡುವ ಒಂಟಿತನದ ಬಗ್ಗೆ ಕೆಲ ವಿಚಾರಗಳನ್ನು ಬರೆದಿದ್ದೆ ಅಷ್ಟೆ. ಆದರೆ, ಈ ಗದ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ನಾನು ಲಿಖಿತವಾಗಿ ಎಲ್ಲೂ ಅನುಮತಿ ನೀಡಿಲ್ಲ’ ಎಂದು ಹೇಳಿದ್ದಾರೆ.
ತಾನು ಬೇರೆಲ್ಲೋ ಬರೆದ ಲೇಖನವನ್ನ ತನ್ನ ಗಮನಕ್ಕೆ ತಾರದೆಯೇ ಪಠ್ಯಪುಸ್ತಕಕ್ಕೆ ಅಳವಡಿಸಲಾಗಿದೆ. ಇದಕ್ಕಾಗಿ ನಾನು ಯಾವುದೇ ಸಂಭಾವನೆ ಪಡೆದಿಲ್ಲ. ಲೇಖನವನ್ನು ಪಠ್ಯಪುಸ್ತಕಕ್ಕೆ ಅಳವಡಿಸುವ ಮುನ್ನ ಪಠ್ಯಪುಸ್ತಕ ಸಮಿತಿಯು ಅದನ್ನು ಸರಿಯಾಗಿ ಪರಾಮರ್ಶಿಸಬೇಕಿತ್ತು. ವೈಚಾರಿಕ ಭಾಷಣಗಳೇ ಬೇರೆ, ಪಠ್ಯಪುಸ್ತಕದ ಲೇಖನಗಳೇ ಬೇರೆ. ಪಠ್ಯಪುಸ್ತಕದಲ್ಲಿ ಪ್ರಕಟಿಸುವಾಗ ಯಾರ ಭಾವನೆಗೂ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ನನ್ನ ಲೇಖನದಿಂದ ಸೈನಿಕರಿಗೆ ನೋವಾಗಿದ್ದರೆ ಬೇಷರತ್ ಕ್ಷಮೆ ಕೇಳುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.