ರಾಜ್ಯದೆಲ್ಲಡೆ ವರುಣ ಮತ್ತೆ ಅಬ್ಬರಿಸಿದ್ದಾನೆ. ನಿನ್ನೆ ಸುರಿದ ಭಾರೀ ಮಳೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಜನ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರು(ಅ.13): ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ಹಲವು ರಸ್ತೆಗಳು ಜಲಾವೃತಗೊಂಡು, ಸವಾರರು ತೊಂದರೆ ಎದುರಿಸಬೇಕಾಯ್ತು. ನಾಯಂಡಹಳ್ಳಿ ಬಳಿ ಜನತಾ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರ ಸೃಷ್ಟಿಯಾಗಿತ್ತು. ಜನ ಪರದಾಡುತ್ತಿದ್ದರೆ ನಾಯಂಡಹಳ್ಳಿ ಬಿಬಿಎಂಪಿ ಕಾರ್ಪೋರೇಟರ್ ಸವಿತಾ .ವಿ.ಕೃಷ್ಣ ಮಾತ್ರ ಘಡತಾಗಿ ನಿದ್ರೆ ಮಾಡುತ್ತಿದ್ರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ರಾತ್ರೋರಾತ್ರಿ ಕಾರ್ಪೋರೇಟರ್​ಮನೆ ಮುತ್ತಿಗೆ ಹಾಕಿದ್ರು.

Add Asianetnews Kannada as a Preferred SourcegooglePreferred

ಬಳ್ಳಾರಿಯಲ್ಲೂ ವರುಣನ ಪ್ರತಾಪ..!

ಬಳ್ಳಾರಿ ಜಿಲ್ಲೆಯಲ್ಲೂ ಸಹ ವರುಣ ತನ್ನ ಕರಾಳ ಮುಖ ತೋರಿಸಿದ್ದಾನೆ. ಆಂಧ್ರದಲ್ಲಿ ಸುರಿದ ಮಳೆಯಿಂದಾಗಿ ವೇದಾವತಿ ನದಿ ತುಂಬಿ ಹರಿಯುತ್ತಿದ್ದು,ಜಾಲಿಬೆಂಚಿ ಗ್ರಾಮ ರಸ್ತೆ ಸಂಪರ್ಕ ಕಡಿದುಕೊಂಡು ದ್ವೀಪವಾಗಿ ಮಾರ್ಪಟ್ಟಿದೆ.

ಚಿಕ್ಕಬಳ್ಳಾಪುರದಲ್ಲೂ ಭಾರೀ ಮಳೆ !

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಕಾಗತಿ ಗ್ರಾಮದಲ್ಲಿ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿ ಭಾರೀ ಅವಾಂತರ ಸೃಷ್ಟಿಯಾಗಿದೆ.

ವರುಣನ ಅಬ್ಬರಕ್ಕೆ ಹಾವೇರಿ ತತ್ತರ!

ಹಾವೇರಿ ಜಿಲ್ಲೆ ಹಾನಗಲ್​ನ ವಿರಾಟನಗರ ಮತ್ತು ನವನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ರು.

ಸಾಂಸ್ಕೃತಿಕ ನಗರಿಯಲ್ಲಿ ವರುಣನ ಆರ್ಭಟ!

ಮೈಸೂರಿನಲ್ಲೂ ಮತ್ತೆ ವರುಣ ಅಬ್ಬರಿಸಿದ್ದಾನೆ. ಭಾರೀ ಮಳೆಯಿಂದಾಗಿ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದ್ರು. ಅಲ್ದೇ ಮೇಯರ್ ವಾರ್ಡಿನಲ್ಲೇ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿತ್ರದುರ್ಗದಲ್ಲೂ ಕೆರೆ-ಕಟ್ಟೆ ಭರ್ತಿ

ಚಿತ್ರದುರ್ಗ ಜಿಲ್ಲೆ ಯ ಕುರುಡಿಹಳ್ಳಿ ಚೆಕ್ ಡ್ಯಾಂ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಘಟಪರ್ತಿ ಹೊನ್ನೂರು ಭರಮಸಾಗರದ ಅಡಿಕೆ ತೆಂಗಿನ ತೋಟಗಳಿಗೆ ನೀರು ನೀರು ನುಗ್ಗಿದೆ.