ಆದಾಯ ತೆರಿಗೆ ಪಾವತಿ: ದೇಶದಲ್ಲಿ ಬೆಂಗಳೂರಿಗೆ ಮೂರನೇ ಸ್ಥಾನ
ತೆರಿಗೆ ಸಂಗ್ರಹಣೆಯಲ್ಲಿ ಮುಂಬೈ ಮತ್ತು ದೆಹಲಿ ತರುವಾಯ ಬೆಂಗಳೂರು ರಾಷ್ಟ್ರದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ.ಮೇಘನಾಥ್ ಚೌಹಾಣ್ ತಿಳಿಸಿದ್ದಾರೆ.
ಬೆಂಗಳೂರು(ಜು.30): ತೆರಿಗೆ ಸಂಗ್ರಹಣೆಯಲ್ಲಿ ಮುಂಬೈ ಮತ್ತು ದೆಹಲಿ ತರುವಾಯ ಬೆಂಗಳೂರು ರಾಷ್ಟ್ರದಲ್ಲಿಯೇ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಕೆ.ಮೇಘನಾಥ್ ಚೌಹಾಣ್ ತಿಳಿಸಿದ್ದಾರೆ.
ಅರಮನೆ ಮೈದಾನದಲ್ಲಿ ಆದಾಯ ತೆರಿಗೆ ಇಲಾಖೆ ಶನಿವಾರದಿಂದ ಮೂರು ದಿನಗಳ ಕಾಲ ಹಮ್ಮಿ ಕೊಂಡಿರುವ ತೆರಿಗೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಯಲ್ಲಿ ಭಾಗವಹಿಸಲು ಎಲ್ಲಾ ತೆರಿಗೆದಾರರು ಕೈ ಜೋಡಿಸ ಬೇಕು. ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಬೇಕು. ಇದರಿಂದ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
2016-17ನೇ ಸಾಲಿನಲ್ಲಿ ಕರ್ನಾಟಕ ಮತ್ತು ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆಯು ₹1.04 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿತ್ತು. ಈ ಬಾರಿ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ. ತೆರಿಗೆದಾರರಿಗೆ ಅರಿವು ಮೂಡಿಸುವ ಸಂಬಂಧ ಎಚ್ಎಎಲ್, ಮಣಿಪಾಲ್ ಆಸ್ಪತ್ರೆ ಸೇರಿದಂತೆ ವಿವಿಧ ಸಂಸ್ಥೆಗಳು ಇಲಾಖೆಯೊಂದಿಗೆ ಕೈ ಜೋಡಿಸಿವೆ. ಸರ್ಕಾರಿ ಕಚೇರಿಗಳಲ್ಲಿಯೂ ವಿಶೇಷ ಕೌಂಟರ್ ತೆರೆಯಬೇಕಿದ್ದು, ಇದರಿಂದ ತೆರಿಗೆದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಇದೇ ವೇಳೆ ವೇತನದಾರರಿಗೆ
ಮತ್ತು ಪಿಂಚಣಿದಾರರಿಗೆ ಐಟಿ ರಿಟರ್ನ್ಸ್ ಸಲ್ಲಿಕೆಗೆ ಅನುಕೂಲವಾಗಲು ವಿಶೇಷ ಕೌಂಟರ್ಗಳನ್ನು ಆರಂಭಿಸಲಾಗಿತ್ತು. ಆನ್ಲೈನ್ ಮೂಲಕ ತೆರಿಗೆ ಪಾವತಿಸುವ ವೇಳೆ ಎದುರಾಗುವ ತಾಂತ್ರಿಕ ದೋಷ ಮತ್ತು ಇತರೆ ಸಮಸ್ಯೆಗಳ ಕುರಿತು ಐಟಿ ಅಧಿಕಾರಿಗಳಿಂದ ತೆರಿಗೆದಾರರು ಮಾಹಿತಿ ಪಡೆದುಕೊಂಡು ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದರು.