ಬೆಂಗಳೂರಿನಲ್ಲಿ ಐದಂತಸ್ತಿನ ಕಟ್ಟಡ ಕುಸಿದು ನಾಲ್ವರು ಕಾರ್ಮಿಕರು ಸಾವು
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಕಟ್ಟಡದಲ್ಲಿ ಉಳಿದಿರುವವರಿಗೆ ಶೋಧ ನಡೆಸಲಾಗಿದೆ. ರಫೀಕ್ ಎನ್ನುವವರಿಗೆ ಸೇರಿದ ಕಟ್ಟಡ ಇದಾಗಿದ್ದು, ಪಿಜಿ ನಿರ್ಮಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ.
ಬೆಂಗಳೂರು(ಫೆ.15): ನಗರದ ಸರ್ಜಾಪುರ ರಸ್ತೆಯ ಕಸವನಹಳ್ಳಿಯಲ್ಲಿ ಐದಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ನಾಲ್ವರು ಸಾವನ್ನಪ್ಪಿ 11 ಮಂದಿ ಗಾಯಗೊಂಡಿದ್ದಾರೆ. ಸಂಜೆ 4 ಗಂಟೆಯ ವೇಳೆ ಕಟ್ಟಡ ಕುಸಿದಿದ್ದು ಸುದ್ದಿ ತಿಳಿಯುತ್ತಲೇ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಕಟ್ಟಡದಲ್ಲಿ ಉಳಿದಿರುವವರಿಗೆ ಶೋಧ ನಡೆಸಲಾಗಿದೆ. ರಫೀಕ್ ಎನ್ನುವವರಿಗೆ ಸೇರಿದ ಕಟ್ಟಡ ಇದಾಗಿದ್ದು, ಪಿಜಿ ನಿರ್ಮಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ.
ಜಾರ್ಜ್,ಮೇಯರ್ ಭೇಟಿ
ಸುದ್ದಿ ತಿಳಿಯುತ್ತಲೇ ಮೇಯರ್ ಸಂಪತ್ ರಾಜ್, ನಗರಾಭಿವೃದ್ಧಿ ಸಚಿವ ಜಾರ್ಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಘೋಷಿಸಿದ್ದಾರೆ.
ಸುಮಾರು 6 ವರ್ಷದ ಹಿಂದೆ 2 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಮಾತ್ರ ಪಾಲಿಕೆಯಿಂದ ಅನುಮತಿ ಪಡೆದಿದ್ದ ಮಾಲೀಕ ಅಕ್ರಮವಾಗಿ 5 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿಸಿದ್ದಾನೆ ಎನ್ನುವುದು ಬಯಲಾಗಿದೆ. ಕಟ್ಟಡ ಕುಸಿಯಲು ಕಳಪೆ ಕಾಮಗಾರಿಯೇ ಕಾರಣ ಎನ್ನಲಾಗುತ್ತಿದೆ. ಈಗ ಕಟ್ಟಡ ದುರಂತ ಸಂಬಂಧ ಮಾಲೀಕ ಹಾಗೂ ಎಂಜಿನಿಯರ್ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.