ಮಂದಿರ ಮಧ್ಯಸ್ಥಿಕೆ ತಂಡ ಇಂದು ಅಯೋಧ್ಯೆಗೆ
ಮಂದಿರ ಮಧ್ಯಸ್ಥಿಕೆ ತಂಡ ಇಂದು ಅಯೋಧ್ಯೆಗೆ | ವಿಶೇಷ ವಿಮಾನದಲ್ಲಿ ಬೆಳಗ್ಗೆ 11ಕ್ಕೆ ಆಗಮನ | ಸಂಧಾನ ಪ್ರಕ್ರಿಯೆಗೆ ಚಾಲನೆ | ಅವಧ್ ವಿವಿಯಲ್ಲಿ ಸಂಧಾನ ಕಾರ್ಯ, ವಾಸ್ತವ್ಯ
ಲಖನೌ (ಮಾ. 12): ಅಯೋಧ್ಯೆ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ನಿಂದ ನೇಮಕವಾಗಿರುವ ತ್ರಿಸದಸ್ಯ ಸಂಧಾನಕಾರರ ತಂಡ ಮಂಗಳವಾರದಿಂದ ಅಧಿಕೃತ ಕೆಲಸ ಆರಂಭಿಸಲಿದೆ.
ಸಂಧಾನಕಾರರ ತಂಡದಲ್ಲಿರುವ ನ್ಯಾ. ಇಬ್ರಾಹಿಂ ಕಲೀಫುಲ್ಲಾ, ಅಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಗುರೂಜಿ, ಹಿರಿಯ ವಕೀಲ ಶ್ರೀರಾಂ ಪಂಚು ಅವರು ವಿಶೇಷ ವಿಮಾನದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಅಯೋಧ್ಯೆ ತಲುಪಲಿದ್ದಾರೆ.
ಇವರಿಗೆ ಅಯೋಧ್ಯೆಯ ಅವಧ್ ವಿವಿಯಲ್ಲಿ ‘ಮಿನಿ ಕಚೇರಿ’ ತೆರೆಯಲಾಗಿದೆ. ಈ ಕಚೇರಿಯಲ್ಲೇ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ, ಸಂಧಾನ ಕೊಠಡಿ ಹಾಗೂ ಇತರ ವ್ಯವಸ್ಥೆಗಳನ್ನು ಮಾಡಿ ಕೊಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶಾನುಸಾರ 8 ವಾರದಲ್ಲಿ ಇವರು ಸಂಧಾನ ಪ್ರಕ್ರಿಯೆ ಮುಗಿಸಬೇಕಿದೆ. ಅಲ್ಲದೆ, ಸಂಧಾನ ಪ್ರಕ್ರಿಯೆ ರಹಸ್ಯವಾಗಿರಲಿದ್ದು, ಇದರ ವರದಿಗಾರಿಕೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ತಂಡದ ಸಂಚಾರದ ಬಗ್ಗೆ ಯಾವುದೇ ಮಾಹಿತಿಯನ್ನು ಸರ್ಕಾರ ನೀಡುವುದಿಲ್ಲ.