ಅಲ್ಲಿ ಇಲ್ಲಿ ಓಡುವೆ ಏಕೆ: 'ಆಯುಷ್ಮಾನ್ ಭಾರತ್' ಮನೆ ಬಾಗಿಲಿಗೆ ಬರ್ತಿದೆ ಬೇಕೆ?
ಮನೆ ಬಾಗಿಲಿಗೆ ಬರ್ತಿದೆ ಆಯಷ್ಮಾನ್ ಭಾರತ್ ಅರ್ಹತಾ ಪತ್ರ| ಅರ್ಜಿ ಹಾಕುವ ಗೊಡವೆ ಇಲ್ಲ, ದಾಖಲೆಯ ಕಿರುಕುಳ ಇಲ್ಲ| ನೇರವಾಗಿ ಮನೆಗೆ ಬರುತ್ತಿವೆ ಆಯುಷ್ಮಾನ್ ಭಾರತ್ ಅರ್ಹತಾ ಪತ್ರಗಳು| ಕೇಂದ್ರದ ನಿರ್ಧಾರದಿಂದ ಜನಸಾಮಾನ್ಯ ಫುಲ್ ಖುಷ್| ವಿಳಾಸ ತಪ್ಪಿನಿಂದ ಪೋಸ್ಟ್ಮನ್ಗಳಿಗೆ ಪರದಾಟ
ಬೆಂಗಳೂರು(ಜ.09): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 'ಆಯುಷ್ಮಾನ್ ಭಾರತ' ಆರೋಗ್ಯ ವಿಮೆ ಯೋಜನೆಯ ಅರ್ಹತಾ ಪತ್ರಗಳು ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮನೆಗೆ ತಲುಪುತ್ತಿವೆ.
ಯಾವುದೇ ಅರ್ಜಿ ಅಥವಾ ದಾಖಲೆಯ ಕಿರುಕುಳ ಇಲ್ಲದೆ ಈ ಯೋಜನೆಯ ಪ್ರಯೋಜನ ತಮಗೆ ಸಿಗುತ್ತಿರುವ ಬಗ್ಗೆ ನಾಗರಿಕರು ಫುಲ್ ಖುಷ್ ಆಗಿದ್ದಾರೆ. ಆದರೆ ಅರ್ಹತಾ ಪತ್ರದಲ್ಲಿ ನಮೂದಿಸಿರುವ ವಿಳಾಸಗಳು ತಪ್ಪಾಗಿರುವುದರಿಂದ ಪೋಸ್ಟ್ಮನ್ಗಳು ಪರದಾಡುತ್ತಿದ್ದಾರೆ.
ಅರ್ಹತಾ ಪತ್ರ ಹೊಂದಿದರೆ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್ ಪಡೆಯಲು ಮತ್ಯಾವುದೇ ದಾಖಲೆ ಒದಗಿಸುವಂತಿಲ್ಲ ಎಂಬುದು ಈ ಪ್ರಕ್ರಿಯೆಯ ಉದ್ದೇಶ. ಆದರೆ, ಸರಿ ಇದ್ದ ವಿಳಾಸವನ್ನೇ ಪತ್ತೆ ಹಚ್ಚಿ ಬಟಾವಡೆ ಮಾಡುವುದೇ ಕಷ್ಟದ ಕೆಲಸ. ಈ ನಡುವೆ ತಪ್ಪು ವಿಳಾಸಗಳಿಂದಾಗಿ ಆಯುಷ್ಮಾನ್ ಅರ್ಹತಾ ಪತ್ರಗಳ ಸಮರ್ಪಕ ವಿತರಣೆ ಪೋಸ್ಟ್ ಮ್ಯಾನ್ಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಅಂತ್ಯೋದಯ ಕುಂಟುಂಬಕ್ಕೆ ಸಂಪೂರ್ಣ ಉಚಿತ ಚಿಕಿತ್ಸೆ, ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಹಾಗೂ ಎಪಿಲ್ ಕುಟುಂಬಕ್ಕೆ 1.50 ಲಕ್ಷ ರೂ.ವರೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.