ಅಂತಿಮ ಹಂತಕ್ಕೆ ಅಯೋಧ್ಯೆ ವಿಚಾರ, ಜನವರಿಯಲ್ಲಿ ತೀರ್ಪು?
ಒಂದು ಕಡೆ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಇದೀಗ ಅಯೋಧ್ಯೆ ವಿಚಾರದಲ್ಲಿಯೂ ನ್ಯಾಯಾಲಯ ಅಂತಿಮ ಹಂತಕ್ಕೆ ಬಂದಿದ್ದು ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆಯನ್ನು 2019ರ ಜನವರಿಗೆ ಮುಂದೂಡಿದೆ.
ನವದೆಹಲಿ[ಅ.29] ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ವಿಚಾರಣೆಯನ್ನು 2019ರ ಜನವರಿ ತಿಂಗಳಿಗೆ ಮುಂದೂಡಿದೆ. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ರಾಮ ಜನ್ಮಭೂಮಿಯನ್ನು 3 ಭಾಗಗಳಾಗಿ ಹಂಚಿತ್ತು. ಇದನ್ನು ಪ್ರಶ್ನಿಸಿ ವಿವಿಧ ವರ್ಗಗಳ ಕಕ್ಷಿದಾರರು ಮೇಲ್ಮನವಿ ಸಲ್ಲಿಸಿದ್ದನ್ನು ವಿಚಾರಣೆ ಮಾಡಲಾಗಿತ್ತು.
ವಿಚಾರಣೆಯನ್ನು ಮುಖ್ಯ ನ್ಯಾಯಾಮೂರ್ತಿ ರಂಜನ್ ಗೊಗೋಯ್, ನ್ಯಾ.ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾ.ಕೆ.ಎಂ ಜೋಸೆಫ್ ಅವರ ತ್ರಿಸದಸ್ಯ ಪೀಠ ನಡೆಸಿದ್ದು, 2019ರ ಜನವರಿ ತಿಂಗಳಿಗೆ ವಿಚಾರಣೆಯನ್ನು ಮುಂದೂಡಿದೆ.
ಲೋಕಸಭಾ ಚುನಾವಣೆ: ಬಿಜೆಪಿ ಗೆಲ್ಲಲು ರಾಮಮಂದಿರ ನಿರ್ಮಾಣ ಅನಿವಾರ್ಯನಾ?
2010ರಲ್ಲಿ ನೀಡಿದ್ದ ತೀರ್ಪಿನಲ್ಲಿ ವಿವಾದಕ್ಕೆ ಕಾರಣವಾಗಿದ್ದ 2.77 ಎಕರೆ ಜಾಗವನ್ನು ಸನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ್ ಲಲ್ಲಾಗೆ ಸಮನಾಗಿ ಹಂಚಿಕೆ ಮಾಡಲಾಗಿತ್ತು. ಇದಕ್ಕೂ ಮುನ್ನ ಸೆ.27ರಂದು ಮಸೀದಿ ಅವಿಭಾಜ್ಯ ಅಂಗವಲ್ಲ ಎಂಬ ತನ್ನ ಹಳೆ ತೀರ್ಪನ್ನು ಬಾಬ್ರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಪುನರುಚ್ಚರಿಸಿತ್ತು.