ಮೈಸೂರು ಪಾಕ್ ಟ್ವೀಟ್ಗೆ ಜನ ಬೇಸ್ತು!| ತಮಿಳುನಾಡಿಗೆ ಮೈಸೂರು ಪಾಕ್ ಜಿಐ ಟ್ಯಾಗ್ ನೀಡಿದ್ದಾಗಿ ಟ್ವೀಟ್
ನವದೆಹಲಿ[ಸೆ.17]: ಕರ್ನಾಟಕದ ಪ್ರಸಿದ್ಧ ಸಿಹಿ ತಿನಿಸು ಎನಿಸಿಕೊಂಡಿರುವ ಮೈಸೂರು ಪಾಕ್ ಇದೀಗ ತಮಿಳುನಾಡಿನ ಭೌಗೋಳಿಕ ಸೂಚಕದ ತಿನಿಸಾಗಿದೆ ಎಂಬ ತಮಿಳುನಾಡಿನ ಲೇಖಕ, ವಿಜ್ಞಾನಿ ಹಾಗೂ ಅಂಕಣಕಾರ ಆನಂದ್ ರಂಗನಾಥನ್ ಅವರು ಮಾಡಿದ್ದ ಟ್ವೀಟೊಂದು ಕರ್ನಾಟಕದಲ್ಲಿ ಕೆಲ ಹೊತ್ತು ಆಕ್ರೋಶದ ಕಿಡಿಯನ್ನೇ ಹೊತ್ತಿಸಿದ ಘಟನೆ ಸೋಮವಾರ ನಡೆದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮೈಸೂರು ಪಾಕ್ಗಳನ್ನೊಳಗೊಂಡ ಬಾಕ್ಸ್ ನೀಡುವಂಥ ಚಿತ್ರವೊಂದನ್ನು ಅಂಕಣಕಾರ ಆನಂದ್ ರಂಗನಾಥನ್ ಸೋಮವಾರ ಟ್ವೀಟ್ ಮಾಡಿದ್ದರು. ‘ತಮಿಳುನಾಡಿಗೆ ಮೈಸೂರು ಪಾಕ್ ಜಿಐ ಟ್ಯಾಗ್ ನೀಡಿರುವುದಕ್ಕಾಗಿ ಏಕ ಸದಸ್ಯ ಸಮಿತಿಯ ಪರವಾಗಿ ಈ ಪ್ರಶಂಸೆ ಸ್ವೀಕರಿಸಲು ಸಂತಸವಾಗುತ್ತಿದೆ’ ಎಂದವರು ಟ್ವೀಟ್ನಲ್ಲಿ ಬರೆದುಕೊಂಡಿದ್ದರು.
ಇದು ಹಾಸ್ಯ ಎಂದು ಅರಿಯದೇ ಹಲವು ಸುದ್ದಿವಾಹಿನಿಗಳು ಇದನ್ನು ನಿಜ ಎಂದೇ ಬಿಂಬಿಸಿ ವರದಿ ಮಾಡಿದವು. ಇದಕ್ಕೆ ರಾಜಕೀಯ ನಾಯಕರ ಪ್ರತಿಕ್ರಿಯೆ, ವಿರೋಧವೂ ಕೇಳಿಬಂತು. ಪ್ರತಿಭಟನೆಯ ಮಾತುಗಳೂ ಮೊಳಗಿದವು. ಇಷ್ಟಾಗುವಷ್ಟರಲ್ಲಿ ಈ ಸುದ್ದಿ ಆನಂದ್ ರಂಗನಾಥನ್ ಅವರ ಕಿವಿಗೂ ಬಿತ್ತು. ವಿಷಯ ಹೀಗೆ ಬಿಟ್ಟರೆ ಅದು ದೊಡ್ಡ ಅನಾಹುತವಾದೀತು ಎಂದು ಅರಿತ ಅವರು, ಇದು ತಮಾಷೆಗಾಗಿ ಮಾಡಿದ ಟ್ವೀಟ್ ಎಂದು ಸಮಾಜಾಯಿಷಿ ನೀಡಿ, ವಿಷಯವನ್ನು ತಣ್ಣಗಾಗಿಸುವ ಕೆಲಸ ಮಾಡಿದರು.
