ಸಿಂಗಾಪುರದಲ್ಲೂ ಬಿಜೆಪಿ ಟೀಕಿಸಿದ ರಾಹುಲ್
ವಿದೇಶಗಳಲ್ಲೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ನೀತಿಯನ್ನು ಟೀಕಿಸುವ ಸಂಪ್ರದಾಯ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅಧಿಕಾರಕ್ಕಾಗಿ ಬಿಜೆಪಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಸಿಂಗಾಪುರ: ವಿದೇಶಗಳಲ್ಲೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ನೀತಿಯನ್ನು ಟೀಕಿಸುವ ಸಂಪ್ರದಾಯ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅಧಿಕಾರಕ್ಕಾಗಿ ಬಿಜೆಪಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ತಮ್ಮ ಮೂರು ದಿನಗಳ ಸಿಂಗಾಪುರ, ಮಲೇಷ್ಯಾ ಪ್ರವಾಸದ ಅನ್ವಯ, ಗುರುವಾರ ಇಲ್ಲಿನ ಪ್ರತಿಷ್ಠಿತ ಲೀ ಕೌನ್ ಯೆವ್ ಸ್ಕೂಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಚುನಾವಣೆಗಳನ್ನು ಗೆಲ್ಲಲು, ಜನರನ್ನು ವಿಭಜಿಸುವ ರಾಜಕಾರಣ ವಿವಿಧೆಡೆ ನಡೆಯುವಂತೆ ಭಾರತದಲ್ಲೂ ನಡೆಯುತ್ತಿದೆ. ಬೆದರಿಕೆಯ ಮೂಲಕ ಚುನಾವಣೆಗೆ ಗೆಲ್ಲುವ ಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಳಕ್ಕೆ ಈಗಿನ ಬಿಜೆಪಿ ಸರ್ಕಾರದ ನೀತಿಗಳೇ ಕಾರಣ. ಮನಮೋಹನ್ಸಿಂಗ್ ಅವಧಿಯಲ್ಲಿ ನಾವು ವಿಶೇಷ ಆಸ್ಥೆ ವಹಿಸಿ ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೆವು. ಆದರೆ ಉಗ್ರರ ವಿರುದ್ಧ ಈಗಿನ ಸರ್ಕಾರ ಕೈಗೊಂಡ ನೀತಿಗಳಿಂದಾಗಿ ಅಲ್ಲಿ ಮತ್ತೆ ಹಿಂಸಾಚಾರ ಹೆಚ್ಚಿದೆ ಎಂದು ಕಿಡಿಕಾರಿದರು.
ತಮ್ಮ ಮೂರು ದಿನಗಳ ಭೇಟಿ ವೇಳೆ ಎರಡೂ ದೇಶಗಳ ರಾಜಕೀಯ ನಾಯಕರು, ಭಾರತೀಯ ಮೂಲದ ಸಿಇಒಗಳು, ಭಾರತೀಯ ಸಮುದಾಯದ ಜನರ ಜೊತೆ ರಾಹುಲ್ ಸಂವಾದ ನಡೆಸಲಿದ್ದಾರೆ.