ದಿವಂಗತ ನಟ ವಿಷ್ಣುವರ್ಧನ್​ ಅವರ ಸ್ಮಾರಕ ನಿರ್ಮಾಣಕ್ಕೆ ಮಂಜೂರಾಗಿದ್ದ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿದ್ದನ್ನು ಸುವರ್ಣನ್ಯೂಸ್​  ಕೆಲವೇ ದಿನಗಳ ಹಿಂದೆಯಷ್ಟೇ ಬಯಲಿಗೆಳೆದಿತ್ತು. ವರದಿ ಪ್ರಸಾರವಾದ ನಂತರ ಕಂದಾಯ ಇಲಾಖೆ ಎಚ್ಚೆತ್ತುಕೊಂಡಿದೆ. ನ್ಯಾಯಾಂಗ ಇಲಾಖೆಗೆ ಜಮೀನು ಮಂಜೂರು ಮಾಡಿರುವ ಕುರಿತು ವರದಿ ಕೊಡಿ ಎಂದು ತಹಶೀಲ್ದಾರ್​​ಗೆ ಬೆಂಗಳೂರು ದಕ್ಷಿಣ ವಿಭಾಗದ ಅಸಿಸ್ಟಂಟ್​ ಕಮಿಷನರ್​​ ಸೂಚಿಸಿದ್ದಾರೆ. ಇದು ಸುವರ್ಣನ್ಯೂಸ್​ ಇಂಪ್ಯಾಕ್ಟ್​.

ಬೆಂಗಳೂರು (ಸೆ.04): ದಿವಂಗತ ನಟ ವಿಷ್ಣುವರ್ಧನ್​ ಅವರ ಸ್ಮಾರಕ ನಿರ್ಮಾಣಕ್ಕೆ ಮಂಜೂರಾಗಿದ್ದ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿದ್ದನ್ನು ಸುವರ್ಣನ್ಯೂಸ್​ ಕೆಲವೇ ದಿನಗಳ ಹಿಂದೆಯಷ್ಟೇ ಬಯಲಿಗೆಳೆದಿತ್ತು. ವರದಿ ಪ್ರಸಾರವಾದ ನಂತರ ಕಂದಾಯ ಇಲಾಖೆ ಎಚ್ಚೆತ್ತುಕೊಂಡಿದೆ. ನ್ಯಾಯಾಂಗ ಇಲಾಖೆಗೆ ಜಮೀನು ಮಂಜೂರು ಮಾಡಿರುವ ಕುರಿತು ವರದಿ ಕೊಡಿ ಎಂದು ತಹಶೀಲ್ದಾರ್​​ಗೆ ಬೆಂಗಳೂರು ದಕ್ಷಿಣ ವಿಭಾಗದ ಅಸಿಸ್ಟಂಟ್​ ಕಮಿಷನರ್​​ ಸೂಚಿಸಿದ್ದಾರೆ. ಇದು ಸುವರ್ಣನ್ಯೂಸ್​ ಇಂಪ್ಯಾಕ್ಟ್​.

ಕೇಂಗೇರಿ ಹೋಬಳಿ ವ್ಯಾಪ್ತಿಯ ಮೈಲಸಂದ್ರದ ಸರ್ವೆ ನಂಬರ್​ 22ರಲ್ಲಿ 2 ಎಕರೆ ಜಮೀನನ್ನು ದಿವಂಗತ ನಟ ವಿಷ್ಣುವರ್ಧನ್​​ ಸ್ಮಾರಕಕ್ಕೆ ಕೊಡಲು ನಿರಾಕರಿಸಿದ್ದ ಕಂದಾಯ ಇಲಾಖೆ, ಅದೇ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿತ್ತು. ಕಂದಾಯ ಇಲಾಖೆಯ ತಾರತಮ್ಯವನ್ನು ಸುವರ್ಣನ್ಯೂಸ್​ ಬಯಲಿಗೆಳೆದ ನಂತರ ಅಸಿಸ್ಟಂಟ್​ ಕಮಿಷನರ್​ ಹರೀಶ್​​ ನಾಯಕ್​ ಎಚ್ಚೆತ್ತುಕೊಂಡಿದ್ದಾರೆ.

ಅರಣ್ಯ ಪ್ರದೇಶದ 100 ಮೀಟರ್​ ವ್ಯಾಪ್ತಿಯೊಳಗಿದ್ದ ಜಮೀನನ್ನು ವಿಷ್ಣು ಸ್ಮಾರಕಕ್ಕೆ ಮಂಜೂರು ಮಾಡಿದ್ದನ್ನು ರದ್ದುಗೊಳಿಸ್ಬೇಕು ಎಂದು ಹೈಕೋರ್ಟ್​ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಅದೇ ಜಮೀನನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿದ್ದ ಕಂದಾಯ ಇಲಾಖೆ ಹೈಕೋರ್ಟ್​ ಆದೇಶವನ್ನು ಉಲ್ಲಂಘಿಸಿತ್ತು. ಆದರೀಗ, ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ಕೊಡಿ ಎಂದು ಬೆಂಗಳೂರು ದಕ್ಷಿಣ ವಿಭಾಗದ ಅಸಿಸ್ಟಂಟ್​ ಕಮಿಷನರ್​ ಹರೀಶ್​​ ನಾಯಕ್​​ ಅವರು ತಹಶೀಲ್ದಾರ್​​ಗೆ ಸೂಚಿಸಿದ್ದಾರೆ.

ವಿಷ್ಣುವರ್ಧನ್​ ಸ್ಮಾರಕ ನಿರ್ಮಾಣಕ್ಕೆ ಮಂಜೂರಾಗಿದ್ದು 2 ಎಕರೆ. ನ್ಯಾಯಾಂಗ ಇಲಾಖೆಗೆ ಕಾಯ್ದಿರಿಸಿ ಬರೋಬ್ಬರಿ 10 ಎಕರೆ ಮಂಜೂರು ಮಾಡಿತ್ತು. ಇದು ಕೂಡ ಬಫರ್​ ಜೋನ್​​ನಲ್ಲಿ ಬರುತ್ತೆ. ಬಫರ್​ ಜೋನ್​​ನಲ್ಲಿನ ಜಮೀನನ್ನೇ ಪುನಃ ನ್ಯಾಯಾಂಗ ಇಲಾಖೆಗೆ ಕಾಯ್ದಿರಿಸಿ ಹೊರಡಿಸಿರುವ ಆದೇಶಕ್ಕೆ ಅರಣ್ಯ ಇಲಾಖೆ ತಕರಾರು ತೆಗೆದಿತ್ತು. ನ್ಯಾಯಾಂಗ ಇಲಾಖೆಗೆ ಕಾಯ್ದಿರಿಸಿ ಆದೇಶ ಹೊರಡಿಸುವ ಮೊದಲು ಅರಣ್ಯ ಇಲಾಖೆಯ ಸಹಮತಿಯನ್ನೇ ಪಡ್ಕೊಂಡಿರಲಿಲ್ಲ.