Asianet Suvarna News Asianet Suvarna News

2ನೇ ದಿನಕ್ಕೆ 'ಆಶಾ' ಮುಷ್ಕರ; ಕುಸಿದು ಬಿದ್ದಳು ಒಬ್ಬ ಮಹಿಳೆ; ಮಳೆ ಚಳಿಯಲ್ಲೇ ರಾತ್ರಿ ಕಳೆದ 25 ಸಾವಿರ ಕಾರ್ಯಕರ್ತೆಯರು

* ಬೆಂಗಳೂರಲ್ಲಿ ಮುಂದುವರಿದ ಆಶಾ ಕಾರ್ಯಕರ್ತೆರ ಪ್ರತಿಭಟನೆ

* 25 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

* ಪುಟ್ಟ ಪುಟ್ಟ ಕಂದಮ್ಮಗಳ ಜೊತೆ ರಸ್ತೆಯಲ್ಲೇ ರಾತ್ರಿ ಕಳೆದ ಹೋರಾಟಗಾರರು

* ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಸವಾಲು

* ಮಕ್ಕಳು, ಮಹಿಳೆಯರ ಕಣ್ಣೀರಿಗೆ ಕರಗುತ್ತಾ ರಾಜ್ಯ ಸರ್ಕಾರ?

asha workers protest second day

ಬೆಂಗಳೂರು(ಸೆ. 08): ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದೆ.. ಅಹೋರಾತ್ರಿ ಧರಣಿ ನಡೆಸಿದ್ದು, ಬಳ್ಳಾರಿ ಮೂಲದ ಆಶಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡಿದ್ದಾರೆ. ನಾಗವೇಣಿ ಅಸ್ವಸ್ಥಗೊಂಡ ಆಶಾ ಕಾರ್ಯಕರ್ತೆ. ನಾಗವೇಣಿ ತೀವ್ರ ಚಳಿಜ್ವರದಿಂದಾಗಿ ತಲೆ ಸುತ್ತು ಬಂದು ಕುಸಿದು ಬಿದ್ದರು. ಕೆಲಕಾಲ ಅವರನ್ನು ಸಂತೈಸಿ ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯ್ತು.. ನಿನ್ನೆಯಿಂದ ಇಲ್ಲಿವರೆಗೆ ಇಬ್ಬರು ಆಶಾ ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮಳೆ, ಚಳಿಯಲ್ಲೇ ರಾತ್ರಿ ಕಳೆದ ಕಾರ್ಯಕರ್ತೆಯರು!
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಫ್ರೀಡಂ ಪಾರ್ಕ್'ನಲ್ಲಿ ಅಹೋರಾತ್ರಿ ಮುಷ್ಕರ ನಡೆಸುತ್ತಿರುವ ‘ಆಶಾ’ ಕಾರ್ಯಕರ್ತೆಯರು ಗುರುವಾರ ರಾತ್ರಿ ಸುರಿಯುವ ಮಳೆ, ಚಳಿ, ಗಾಳಿಯ ನಡುವೆಯೇ ಪ್ರತಿಭಟನಾ ಸ್ಥಳದಲ್ಲೇ ಮಲಗಿ ರಾತ್ರಿ ದೂಡಿದರು. ಮಕ್ಕಳನ್ನು ಕರೆತಂದಿದ್ದ ಮಹಿಳೆಯರು ಮಕ್ಕಳನ್ನೂ ಜತೆಯಲ್ಲೇ ಮಲಗಿಸಿಕೊಂಡು ತಾವು ಜಾಗರಣೆ ಮಾಡಿದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೂರದ ಊರುಗಳಿಂದ ನಗರಕ್ಕೆ ಆಗಮಿಸಿದ ಕಾರ್ಯಕರ್ತೆಯರ ಪೈಕಿ ಕೆಲ ಒಬ್ಬಂಟಿ ತಾಯಂದಿರು ಹಾಗೂ ತಮ್ಮನ್ನು ಬಿಟ್ಟಿರಲಾರದ ಮಕ್ಕಳನ್ನು ತಾಯಂದಿರು ಪ್ರತಿಭಟನೆಗೆ ಜತೆಯಲ್ಲೇ ಕರೆತಂದು ಬೆಳಗ್ಗೆ ಯಿಂದಲೇ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಸಂಜೆ ಮಳೆ ಆರಂಭವಾದರೂ ಅತ್ತಿತ್ತ ಕದಲದ ಆಶಾ ಕಾರ್ಯಕರ್ತೆಯರು ತಮ್ಮ ಹಸುಗೂಸುಗಳು, ಸಣ್ಣಪುಟ್ಟ ಮಕ್ಕಳೊಂದಿಗೆ ಮಳೆಯಿಂದ ರಕ್ಷಣೆಗೆ ಪ್ರತಿಭಟನಾ ಸ್ಥಳದಲ್ಲಿ ಹಾಕಲಾಗಿದ್ದ ಪೆಂಡಾಲ್, ಅಕ್ಕಪಕ್ಕದ ರಸ್ತೆಗಳಲ್ಲಿನ ಮರಗಳಡಿ ಹಾಗೂ ಅಂಗಡಿ-ಮುಂಗಟ್ಟು, ಎಟಿಎಂ ಕೇಂದ್ರಗಳಡಿ ಆಶ್ರಯ ಪಡೆದರು. ಮಳೆ ಬಿಟ್ಟ ಬಳಿಕ ಕೂಡಲೇ ತಾವು ರಕ್ಷಣೆಗೆ ಹುಡುಕಿಕೊಂಡಿದ್ದ ಜಾಗಗಳಲ್ಲೇ ಮಲಗಿದರು. ಕೆಲವರು ತಮ್ಮ ಮಕ್ಕಳನ್ನು ಮಲಗಿಸಿ ರಾತ್ರಿ ಇಡೀ ತಾವು ಎಚ್ಚರವಾಗಿಯೇ ಇದ್ದರೆ, ಇನ್ನು ಕೆಲವರು ಕೂತಲ್ಲೇ ತೂಕಡಿಸಿ ನಿದ್ದೆಯ ಮಂಪರು ಕಳೆದುಕೊಳ್ಳುತ್ತಿದ್ದರು. ಬಹಳಷ್ಟು ಜನ ತಮ್ಮ ಬ್ಯಾಗುಗಳನ್ನೇ ತಲೆದಿಂಬಾಗಿಸಿಕೊಂಡು ಮೊದಲೇ ತಂದಿದ್ದ ಹೊದಿಕೆ ಹೊದ್ದು ಮಲಗಿದರು. ಯಾವುದೇ ಹೊದಿಕೆ ತರದವರು ರಾತ್ರಿ ಇಡೀ ಚಳಿಯಲ್ಲಿ ನಡುಗುವ ಪರಿಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಮಕ್ಕಳನ್ನು ಕರೆತಂದಿದ್ದ ಕೆಲ ಮಹಿಳೆ ಯರು, ಏನು ಮಾಡೋದು ನಾವು ಒಬ್ಬಂಟಿ, ನಮ್ಮ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಅನಿವಾರ್ಯವಾಗಿ ಕರೆತರಬೇಕಾಯಿತು ಎಂದು ಹೇಳಿದರು. ಇನ್ನು ಕೆಲವರು ನಮ್ಮ ಮಕ್ಕಳು ನಮ್ಮನ್ನು ಬಿಟ್ಟು ಇರುವುದಿಲ್ಲ. ಹಾಗಾಗಿ ಕರೆತರಬೇಕಾಯಿತು ಎಂದು ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ
epaper.kannadaprabha.in

Follow Us:
Download App:
  • android
  • ios