ಒಬ್ಬರು ಪಕೋಡ ರಾಜಕೀಯ ಮತ್ತೊಬ್ಬರು ಜನಿವಾರ ರಾಜಕೀಯ: ಮೋದಿ, ರಾಹುಲ್ ವಿರುದ್ಧ ಓವೈಸಿ ಟೀಕೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹೈದ್ರಾಬಾದ ಸಂಸದ ಅಸಾದುದ್ಧೀನ್ ಒವೈಸಿ ಕಿಡಿ ಕಾರಿದ್ದಾರೆ.
ಕಲ್ಬುರ್ಗಿ (ಫೆ.05): ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹೈದ್ರಾಬಾದ ಸಂಸದ ಅಸಾದುದ್ಧೀನ್ ಒವೈಸಿ ಕಿಡಿ ಕಾರಿದ್ದಾರೆ.
ಇಲ್ಲಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಸ್ಲಿಂ ವೈಯುಕ್ತಿಕ ಕಾನೂನು ಸಂವಾದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಓವೈಸಿ, ಸಂಘ ಪರಿವಾರದ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಂಘಪರಿವಾರದವರು ಸತ್ತ ಹೆಣ ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಆದರೆ ಅವರಂಥ ಬುದ್ಧಿ ನಮಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಪಕೋಡಾ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ನಿಮ್ಮ ಪಕೋಡ ರಾಜಕೀಯ ಬಹಳ ದಿನ ನಡೆಯಲ್ಲ. ಪಕೋಡ ಮಾರೋದ್ರಿಂದ ಜೀವನ ನಡೆಸಲು ಸಾಧ್ಯವಿಲ್ಲ. ಒಬ್ಬರು ಪಕೋಡ ರಾಜಕೀಯ, ಮತ್ತೊಬ್ಬರು ಜನಿವಾರ್ ರಾಜಕೀಯ ಮಾಡ್ತಿದಾರೆ ಎಂದು ಅವರು ರಾಹುಲ್ ಗಾಂಧಿ ವಿರುದ್ಧವೂ ಕಿಡಿಕಾರಿದರು.
ತ್ರಿವಳಿ ತಲಾಖ್'ಗೆ ಸಂಬಂಧಿಸಿದಂತೆ ಮುಸ್ಲಿಂ ಧರ್ಮದ ವಿಚಾರಕ್ಕೆ ಮೋದಿ ಕೈ ಹಾಕಿದ್ದಾರೆ ಎಂದು ಕಿಡಿಕಾರಿದ ಅವರು, ಮೋದಿಗೆ ಇರೋದು ಒಬ್ಬಳೇ ಪತ್ನಿ. ಆ ಒಂದು ಪತ್ನಿಯನ್ನೆ ತನ್ನ ಬಳಿ ಇಟ್ಟುಕೊಳ್ಳೋಕೆ ಆಗುತ್ತಿಲ್ಲ. ಇಂತಹದರಲ್ಲಿ ಇಸ್ಲಾಂ ಧರ್ಮದ ತಲಾಖ್ ಬಗ್ಗೆ ಮಾತಾಡೋಕೆ ಮೋದಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಾನು ಬಿಜೆಪಿಯೊಂದಿಗೆ ಸಂಬಂಧ ಬೆಳೆಸಿದೀನಿ ಅಂತ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದು ಅಸಾಧ್ಯದ ಮಾತು. ನಾನು 22 ಕ್ಯಾರೇಟ್ ಗೋಲ್ಡ್ ಇದ್ದಂಗೆ ಎಂದು ಓವೈಸಿ ಬಿಜೆಪಿ ಜೊತೆ ಹೊಂದಾಣಿಕೆಯ ಆರೋಪ ತಳ್ಳಿ ಹಾಕಿದರು.