ರೈಲು ಪ್ರಯಾಣಿಕರು 20 ನಿಮಿಷಕ್ಕೂ ಮುನ್ನ ನಿಲ್ದಾಣಕ್ಕೆ ಬರಬೇಕು : ಏಕೆ..?
ಇನ್ನು ಮುಂದೆ ರೈಲು ಯಾನ ಕೈಗೊಳ್ಳುವ ಪ್ರಯಾಣಿಕರು ರೈಲು ಹೊರಡುವ 15 ರಿಂದ 20 ನಿಮಿಷ ಮೊದಲೇ ನಿಲ್ದಾಣದಲ್ಲಿ ರಬೇಕು. ಭದ್ರತಾ ತಪಾಸಣೆಗೆ ಒಳಗಾಗಬೇಕು. ಹಂತಹಂತವಾಗಿ ಈ ವ್ಯವಸ್ಥೆ ದೇಶದ ರೈಲು ನಿಲ್ದಾಣಗಳಲ್ಲಿ ಜಾರಿಗೆ ಬರಲಿದೆ.
ನವದೆಹಲಿ: ವಿಮಾನ ನಿಲ್ದಾಣಗಳಲ್ಲಿರುವ ಭದ್ರತಾ ವ್ಯವಸ್ಥೆಯನ್ನು ದೇಶದ ರೈಲು ನಿಲ್ದಾಣಗಳಲ್ಲೂ ಜಾರಿಗೆ ತರಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಇದರಿಂದಾಗಿ ಇನ್ನು ಮುಂದೆ ರೈಲು ಯಾನ ಕೈಗೊಳ್ಳುವ ಪ್ರಯಾಣಿಕರು ರೈಲು ಹೊರಡುವ 15 ರಿಂದ 20 ನಿಮಿಷ ಮೊದಲೇ ನಿಲ್ದಾಣದಲ್ಲಿ ರಬೇಕು. ಭದ್ರತಾ ತಪಾಸಣೆಗೆ ಒಳಗಾಗಬೇಕು.
ಹಂತಹಂತವಾಗಿ ಈ ವ್ಯವಸ್ಥೆ ದೇಶದ ರೈಲು ನಿಲ್ದಾಣಗಳಲ್ಲಿ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಕರ್ನಾಟಕದ ಹುಬ್ಬಳ್ಳಿ ಹಾಗೂ ಮಾಸಾಂತ್ಯಕ್ಕೆ ಕುಂಭ ಮೇಳ ನಡೆಯಲಿರುವ ಉತ್ತರಪ್ರದೇಶದ ಅಲಹಾಬಾದ್ ರೈಲು ನಿಲ್ದಾಣಗಳಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ. ನಂತರ ಇನ್ನೂ 202 ರೈಲು ನಿಲ್ದಾಣಗಳಲ್ಲಿ ಜಾರಿಗೆ ನೀಲನಕ್ಷೆ ಸಿದ್ಧವಾಗಿದೆ ಎಂದು ರೈಲ್ವೆ ರಕ್ಷಣಾ ದಳ(ಆರ್ಪಿಎಫ್)ದ ನಿರ್ದೇಶಕ ಜನರಲ್ ಅರುಣ್ ಕುಮಾರ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈ ಯೋಜನೆಯಡಿ ರೈಲು ಹೊರಡುವ ಮುನ್ನ ನಿಲ್ದಾಣದ ಪ್ರವೇಶ ದಾರಿಗಳನ್ನು ಮುಚ್ಚಲಾಗುತ್ತದೆ. ರೈಲು ನಿಲ್ದಾಣದಲ್ಲಿ ಎಷ್ಟು ದಾರಿಗಳಿವೆ, ಎಷ್ಟನ್ನು ಮುಚ್ಚಬಹುದು ಎಂಬುದನ್ನು ಮೊದಲು ಗುರುತಿಸಲಾಗುತ್ತದೆ. ಶಾಶ್ವತ ಗೋಡೆ, ಆರ್ಪಿಎಫ್ ಸಿಬ್ಬಂದಿ ಹಾಗೂ ತಾತ್ಕಾಲಿಕ ಗೇಟುಗಳನ್ನು ಬಳಸಿ ಅವನ್ನು ಬಂದ್ ಮಾಡಲಾಗುತ್ತದೆ. ಪ್ರತಿಯೊಂದು ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ವಿಮಾನ ನಿಲ್ದಾಣ ಗಳಲ್ಲಾದರೇ ಪ್ರಯಾಣಿಕರು ವಿಮಾನ ಹೊರಡುವ ಗಂಟೆಗಳ ಮೊದಲೇ ಬರಬೇಕು. ಆದರೆ ರೈಲು ನಿಲ್ದಾಣ ಗಳಲ್ಲಿ 15 ರಿಂದ 20 ನಿಮಿಷ ಮೊದಲು ಆಗಮಿಸಬೇಕಾಗುತ್ತದೆ.
ಭದ್ರತಾ ತಪಾಸಣೆಯಿಂದ ಪ್ರಯಾಣಿಕರಿಗೆ ವಿಳಂಬವಾಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದಿದ್ದಾರೆ. ಹಾಗಂತ ರೈಲು ನಿಲ್ದಾಣಕ್ಕೆ ಬರುವ ಎಲ್ಲ ಪ್ರಯಾಣಿಕರನ್ನೇನೂ ತಪಾಸಣೆ ಮಾಡು ವುದಿಲ್ಲ. ಒಬ್ಬರಾದ ಮೇಲೆ 8 ಅಥವಾ 9 ನೇ ಪ್ರಯಾ ಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಹೊಸ ಕ್ರಮದಿಂದ ರೈಲ್ವೆ ಪ್ರಯಾಣದಲ್ಲಿ ಭದ್ರತೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
10 ದಿನದಿಂದ ಸಿದ್ಧತೆ: ಈಗಾಗಲೇ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. 10 ದಿನದಿಂದ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಅಗತ್ಯ ಪರಿಶೀಲನೆ, ಪ್ರಯಾಣಿಕರ ಬಳಿ ಸರಿಯಾದ ಟಿಕೆಟ್, ದಾಖಲೆಗಳು ಇವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಿದ್ಧತೆಗಳೆಲ್ಲ ಪೂರ್ಣಗೊಂಡ ಬಳಿಕ ವಿಮಾನ ನಿಲ್ದಾಣದಂತೆ ಬ್ಯಾಗೇಜ್ ಸ್ಕ್ಯಾನಿಂಗ್ ಸಹ ಮಾಡಲಾಗುತ್ತದೆ.