ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಿಂದ ವಾಪಸಾದ ಸೇನೆ
ಪಶ್ಚಿಮ ಬಂಗಾಳದ 2 ಪ್ಲಾಜಾಗಳಲ್ಲಿ ಭಾರತೀಯ ಸೇನೆಯನ್ನು ನಿಯೋಜಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮಾಹಿತಿ ತಿಳಿಸದೆ ಸೇನೆಯನ್ನು ನಿಯೋಜಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಕೂಡ ನಡೆಸಿದ್ದರು.
ಕೋಲ್ಕತ್ತಾ(ಡಿ.03): ಮೂರು ದಿನಗಳ ನಂತರ ಶುಕ್ರವಾರ ರಾತ್ರಿ ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾ ಹಾಗೂ ಇತರ ಪ್ರದೇಶಗಳಲ್ಲಿ ಸೇನೆ ವಾಪಸಾಗಿದ್ದು, ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಮಾತಿನ ತಿಕ್ಕಾಟ ಅಂತ್ಯಗೊಂಡಿದೆ.
ನಿಗದಿ ಪಡಿಸಿದ ಮೂರು ದಿನಗಳ ನಮ್ಮ ಕಾರ್ಯ ಚಟುವಟಿಕೆ ಮುಕ್ತಾಯವಾಗಿದ್ದು, ಪ್ಲಾಹಿಟ್ ಟೋಲ್ ಪ್ಲಾಜಾ ಹಾಗೂ ಇತರ ಪ್ರದೇಶಗಳಿಂದ ನಾವು ಸೇನೆಯನ್ನು ವಾಪಸ್ ಕರೆಸಿಕೊಂಡಿದ್ದೇವೆ ಎಂದು ರಕ್ಷಣ ಇಲಾಖೆಯ ಸಿಪಿಆರ್'ಒ ಮುಖ್ಯಸ್ಥರಾದ ಎಸ್'ಎಸ್ ಬಿರ್ದಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ 2 ಪ್ಲಾಜಾಗಳಲ್ಲಿ ಭಾರತೀಯ ಸೇನೆಯನ್ನು ನಿಯೋಜಿಸಲಾಗಿತ್ತು. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಮಾಹಿತಿ ತಿಳಿಸದೆ ಸೇನೆಯನ್ನು ನಿಯೋಜಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಕೂಡ ನಡೆಸಿದ್ದರು.
ಭಾರತೀಯ ಸೇನೆ ರಾಜ್ಯ ಸರ್ಕಾರದ ಆರೋಪವನ್ನು ನಿರಾಕರಿಸಿದ್ದು,ಈ ರೀತಿಯ ವಾಡಿಕೆಯ ಕಾರ್ಯ ಚಟುವಟಿಕೆಯನ್ನು ಪ್ರತಿ ಮೂರ್ನಾಲ್ಕು ವರ್ಷಗಳಿಂದ ಮಾಡುತ್ತ ಬಂದಿದ್ದೇವೆ, ಅದಲ್ಲದೆ 3 ದಿನಗಳ ಕಾಲ ಕೈಗೊಳ್ಳುವ ಸೇನೆಯ ನಿಯೋಜನೆಯನ್ನು ರಾಜ್ಯ ಸರ್ಕಾರಕ್ಕೂ ತಿಳಿಸಿದ್ದೆವು. ಅವರು ಕೂಡ ಒಪ್ಪಿಕೊಂಡಿದ್ದರು ಎಂದು ಬಿರ್ದಿ ತಿಳಿಸಿದ್ದಾರೆ.
ಇದೇ ರೀತಿಯ ಸೇನಾ ಕಾರ್ಯಾಚರಣೆಯ ನಿಯೋಜನೆಯನ್ನು ಈ ವರ್ಷದ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 1ರ ತನಕ ಜಾರ್ಖಂಡ್, ಉತ್ತರ ಪ್ರದೇಶ್, ಬಿಹಾರದಲ್ಲೂ ಕೈಗೊಳ್ಳಲಾಗಿತ್ತು ಎಂದು ಬಂಗಾಳ ಪ್ರದೇಶದ ಮೇಜರ್ ಜನರಲ್ ಸುನೀಲ್ ಯಾದವ್ ತಿಳಿಸಿದ್ದಾರೆ.