ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮ್ಯಾಮ್ ಕೋಸ್) ಎಪಿಎಂಸಿ ಪ್ರಾಂಗಣದಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಅಡಕೆ ಖರೀದಿಯನ್ನು ಸೋಮವಾರದಿಂದ ಆರಂಭಿಸಿದೆ.
ಶಿವಮೊಗ್ಗ(ಡಿ.12): ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ (ಮ್ಯಾಮ್ ಕೋಸ್) ಎಪಿಎಂಸಿ ಪ್ರಾಂಗಣದಲ್ಲಿರುವ ಸಂಘದ ಕಚೇರಿ ಆವರಣದಲ್ಲಿ ಅಡಕೆ ಖರೀದಿಯನ್ನು ಸೋಮವಾರದಿಂದ ಆರಂಭಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾರಿ ಹಾಗೂ ಮ್ಯಾಮ್ಕೋಸ್ ಅಧ್ಯಕ್ಷ ಡಾ.ಎಂ.ಲೋಕೇಶ್ ಮಾತನಾಡಿ, ಯಾವುದೇ ಕೆಲಸ ಕಾರ್ಯಗಳಿಗೆ ಪರಸ್ಪರ ಸಹಕಾರ, ಸಹಬಾಳ್ವೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಡಕೆ ಮಾರಾಟ ಸಹಕಾರ ಸಂಘದ ಸದಸ್ಯರು ಸಹಕಾರದೊಂದಿಗೆ ಮುನ್ನಡೆದಿದ್ದಾರೆ.
ಅಡಕೆ ಖರೀದಿ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಖರೀದಿ ಪ್ರಮಾಣ ಹೆಚ್ಚಾಗಲಿ ಎಂದು ಹೇಳಿದರು. ಮ್ಯಾಮ್ಕೋಸ್ನಿಂದ ಅಡಕೆ ಖರೀದಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಬೆಳೆಗಾರರ ಹಿತ ಕಾಯುತ್ತಾ ವರ್ತಕರ ಮತ್ತು ಬೆಳೆಗಾರರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮ್ಯಾಮ್ಕೋಸ್ ಈ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ ಎಂದ ಅವರು, ರೈತರಿಂದ ಅಡಕೆ ಖರೀದಿಸಿ ಮಾರಾಟ ಮಾಡುವುದರಿಂದ ಹೆಚ್ಚಿನ ವಹಿವಾಟು ನಡೆಸಬಹುದು. ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ ಚಂದ್ರ ಮಾತನಾಡಿ, ಹುಟ್ಟಿನಿಂದ ಹಿಡಿದು ಚಟ್ಟದವರೆಗೂ ಬೇಕಾದ ಸಾಂಪ್ರದಾಯಿಕ ವಸ್ತು ಅಡಕೆ. ಉದ್ಯಮದ ಸ್ವರೂಪವನ್ನು ಇತ್ತೀಚಿನ ವರ್ಷಗಳಲ್ಲಿ ಪಡೆದುಕೊಂಡಿದೆ. ಮ್ಯಾಮ್ಕೋಸ್ ಅಡಕೆ ಖರೀದಿಗೆ ಕ್ಯಾಂಪ್ಕೋದಿಂದ ಅಗತ್ಯ ಸಹಕಾರನೀಡಲಾಗುವುದು ಎಂದು ಹೇಳಿದರು.
ಅಡಕೆ ಬೆಳೆಗಾರರನ್ನು ರಕ್ಷಿಸಬೇಕು. ಹಿಂದೆ ಅಡಕೆ ವ್ಯಾಪಾರ ಮಾಡಿಕೊಂಡವರು ಕೈ ಸುಟ್ಟುಕೊಳ್ಳುತ್ತಿದ್ದದು ಹೆಚ್ಚಾಗುತ್ತಿತ್ತು. ಕಾಲ ಬದಲಾದಂತೆ ಅಡಕೆಗೆ ಮಾರುಕಟ್ಟೆ ಸಿಕ್ಕಿದೆ. ಖರೀದಿ ವಹಿವಾಟು ಹೆಚ್ಚಾಗಿದೆ. ಸಹಕಾರ ಸಂಘಗಳ ಮೂಲಕವೂ ಅಡಕೆ ಖರೀದಿ ಮಾಡಲಾಗುತ್ತಿದೆ. ಅಡಕೆ ಬೆಳೆಗಾರರು, ಖರೀದಿದಾರರು, ಸಹಕಾರಿ ಸಂಸ್ಥೆಗಳು, ಸಾರಿಗೆ ವ್ಯವಸ್ಥೆ ಇವೆಲ್ಲವೂ ಅಡಕೆ ಖರೀದಿ ಪ್ರಕ್ರಿಯೆಯಲ್ಲಿ ಬರುತ್ತವೆ ಎಂದು ತಿಳಿಸಿದರು. ಬೆಳೆಗಾರರು ಸೋತಾಗ ಖರೀದಿದಾರರು ಕೂಡ ಸೋಲುತ್ತಾರೆ. ಎಲ್ಲರಿಗೂ ಉತ್ತಮ ಧಾರಣೆ ಸಿಗುವಂತಾಗಬೇಕು.
ಲಾಭ, ನಷ್ಟಗಳಿಂದ ಹಿಗ್ಗುವುದು ಕುಗ್ಗುವುದು ಬೇಡ. ಅಡಕೆ ಖರೀದಿಯಿಂದ ಮ್ಯಾಮ್ಕೋಸ್ ಜವಾಬ್ದಾರಿ ಹೆಚ್ಚಾಗಿದೆ. ದೇಶದಲ್ಲಿ ಸುಮಾರು 6 ಲಕ್ಷ ಸಹಕಾರ ಸಂಘಗಳಿದ್ದು ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಿವೆ ಎಂದರು. ಮ್ಯಾಮ್ಕೋಸ್ ಉಪಾಧ್ಯಕ್ಷ ವೈ.ಎಸ್.ಸುಬ್ರಮಣ್ಯ, ಕರ್ನಾಟಕ ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಲ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಮಹಾಮಂಡಲ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಚನ್ನಗಿರಿ ತುಮ್ಕೋಸ್ ಅಧ್ಯಕ್ಷ ಎಚ್. ಎಸ್.ಶಿವಕುಮಾರ್, ರಾಜ್ಯ ಅರೆಕಾ ಛೇಂಬರ್ ಅಧ್ಯಕ್ಷ ಮಧುಕರ ನರಸಿಂಹ ಹೆಗಡೆ, ಅಡಕೆ ವರ್ತಕರ ಸಂಘದ ಅಧ್ಯಕ್ಷ ಕಡಿದಾಳು ಗೋಪಾಲ್, ಎಪಿಎಂಸಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರಾದ ವಿಜಯಲಕ್ಷ್ಮಿ, ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ಪಾಟೀಲ್, ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್. ಡೊಂಗ್ರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
