- ತ್ರಿವಳಿ ತಲಾಖ್ ವಿರೋಧಿ ಅರ್ಜಿ ಸಲ್ಲಿಸಿದ ಇಶ್ರತ್- ಪ್ರಧಾನಿ ಮೋದಿ ಕ್ರಮಕ್ಕೆ ಮೆಚ್ಚಿ, ಬಿಜೆಪಿಗೆ ಸೇರ್ಪಡೆ.
ಹೌರಾ: ತ್ರಿವಳಿ ತಲಾಖ್ ವಿರುದ್ಧ ಅರ್ಜಿ ಸಲ್ಲಿಸಿದವರಲ್ಲಿ ಒಬ್ಬರಾದ, ಕೇಂದ್ರ ಸರಕಾರ ಈ ಪದ್ಧತಿಯನ್ನು ಕಾನೂನು ಚೌಕಟ್ಟು ವ್ಯಾಪ್ತಿಗೆ ತರುವಂತೆ ಮಾಡಿದ ಇಶ್ರಾತ್ ಜಹಾನ್ ಬಿಜೆಪಿಗೆ ಸೇರಿದ್ದಾರೆ.
'ತಲಾಖ್ ಸಂತ್ರಸ್ತರ ನೆರವಿಗೆ ಬಂದ ಮೋದಿ ಕ್ರಾಂತಿಕಾರಿ ಕಾನೂನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸಂತೋಷವಾಗಿದ್ದು, ಬಿಜೆಪಿಗೆ ಸೇರಿದ್ದೇನೆ. ಪಕ್ಷದ ಮಹಿಳಾ ಘಟಕದಲ್ಲಿ ಕಾರ್ಯನಿರ್ವಹಿಸುವೆ,' ಎಂದು ಪಕ್ಷಕ್ಕೆ ಸೇರಿದ ಇಶ್ರತ್ ಹೇಳಿದ್ದಾರೆ.
2014ರಲ್ಲಿ ಇಶ್ರತ್ಗೆ ದುಬೈನಿಂದ ಕರೆ ಮಾಡಿದ ಪತಿ ಮೂರು ಬಾರಿ ತಲಾಖ್ ಹೇಳಿ, ವಿಚ್ಚೇದನ ನೀಡಿದ್ದ. ಮುಸ್ಲಿಂ ಸಮುದಾಯದಲ್ಲಿದ್ದ ಈ ಅನಿಷ್ಟ ಪದ್ಧತಿ ವಿರೋಧಿಸಿ, ಇಶ್ರತ್ ಸೇರಿ ಹಲವರು ಅರ್ಜಿ ಸಲ್ಲಿಸಿದ್ದು, ಈ ಪದ್ಧತಿ ಕಾನೂನು ಹಾಗೂ ಸಂವಿಧಾನ ಬಾಹಿರವೆಂದು ಘೋಷಿಸಿ ಕಳೆದ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.
'ಯಾವುದೇ ಪುರುಷ ರಕ್ಷಕರಿಲ್ಲದೇ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಬಹುದು,' ಎಂದು ಮನ್ ಕೀ ಬಾತ್ನಲ್ಲಿ ಮೋದಿ ನಿನ್ನೆ ಘೋಷಿಸಿದ್ದು, ಮುಸ್ಲಿಮ್ ಮಹಿಳೆಯರ ಹೋರಾಟಕ್ಕೆ ಮತ್ತೊಂದು ಗೆಲವು ಸಿಕ್ಕಿದಂತಾಗಿದೆ.
PHOTO CREDIT: ANI
