ಬೆಳಗಾವಿ(ಸೆ.20): ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಅರಣ್ಯದಲ್ಲಿರುವ ವಜ್ರಾ ಜಲಪಾತ ನೋಡಲು ಹೋಗಿ ಕಣ್ಮರೆಯಾಗಿದ್ದ ಯುವಕರು ಸುರಕ್ಷಿತವಾಗಿ ಮರಳಿ ಬಂದಿದ್ದಾರೆ. 

ಕಣ್ಮರೆಯಾಗಿದ್ದ ಯುವಕರು ಜೋಯಡಾ ತಾಲೂಕಿನ ಗೋಬ್ರಾ-ನಾಲಾ ಗ್ರಾಮದಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ ಸ್ನೇಹಿತರು ಅರಣ್ಯ ಚಾರಣಕ್ಕೆ ಪ್ಲಾನ್ ಮಾಡಿದ್ದರು. ಆದರೆ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ, ಗೈಡ್ ಸಹಾಯವಿಲ್ಲದೇ ತಮ್ಮದೇ ಮಾರ್ಗದರ್ಶನದಲ್ಲಿ ಚಾರಣಕ್ಕೆ ತೆರಳಿದಾಗ ನಾಪತ್ತೆಯಾಗಿದ್ದರು. 

ಅದರಂತೆ ಏಳು ಜನ ಸ್ನೇಹಿತರು ನಿನ್ನೆ ಸಂಜೆ ನಾಲ್ಕು ಬೈಕ್ ಮೇಲೆ ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಚಾರಣ ಮತ್ತು ವಜ್ರಾ ಜಲಪಾತ ನೋಡುವುದಕ್ಕಾಗಿ ಒಳಗೆ ಹೋಗಿದ್ದರು. ಆದರೆ ಸರಿಯಾದ ಮಾಹಿತಿ ಇಲ್ಲದ ಕಾರಣ ಈ ಯುವಕರು ಅರಣ್ಯದಲ್ಲಿ ದಾರಿ ತಪ್ಪಿಸಿಕೊಂಡಿದ್ದರು. 

ಕಣ್ಮರೆಯಾದ ಯುವಕರನ್ನ ಪತ್ತೆ ಹಚ್ಚಲು ಬೆಳಗಾವಿ ವಿಭಾಗದ ಡಿಎಫಓ ಬಸವರಾಜ ಪಾಟೀಲ ನೇತೃತ್ವದ ತಂಡ ಶೋಧ ನಡೆಸಿ ಯುವಕರನ್ನ ಸುರಕ್ಷಿತವಾಗಿ ಕಾಡಿನಿಂದ ಹೊರಗೆ ಕರೆದುಕೊಂಡು ಬಂದಿದೆ.