ವಿಧಾನಸಭಾ ಚುನಾವಣೆ ಪ್ರಚಾರಾರ್ಥ ಎರಡು ದಿನಗಳ ಉತ್ತರ ಕರ್ನಾಟಕ ಪ್ರವಾಸಕ್ಕಾಗಿ ಬುಧವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿರುವ ಬಿಜೆಪಿ ಅಧ್ಯಕ್ಷ ಗುರುವಾರದಂದು ‘ಮಹದಾಯಿ ಹೋರಾಟ’ದ ಕೇಂದ್ರ ಸ್ಥಳಗಳಾದ ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ.

ಹುಬ್ಬಳ್ಳಿ : ವಿಧಾನಸಭಾ ಚುನಾವಣೆ ಪ್ರಚಾರಾರ್ಥ ಎರಡು ದಿನಗಳ ಉತ್ತರ ಕರ್ನಾಟಕ ಪ್ರವಾಸಕ್ಕಾಗಿ ಬುಧವಾರ ರಾತ್ರಿ ಹುಬ್ಬಳ್ಳಿಗೆ ಆಗಮಿಸಿರುವ ಬಿಜೆಪಿ ಅಧ್ಯಕ್ಷ ಗುರುವಾರದಂದು ‘ಮಹದಾಯಿ ಹೋರಾಟ’ದ ಕೇಂದ್ರ ಸ್ಥಳಗಳಾದ ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸಂಚರಿಸಲಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂದರ್ಭದಲ್ಲಿ ಅವರು ಹುಬ್ಬಳ್ಳಿಯ ಸಿದ್ಧಾರೂಢ ಮಠ ಸೇರಿದಂತೆ ಹಲವು ದೇವಾಲಯಗಳಿಗೆ ಹಾಗೂ ರಾಷ್ಟ್ರೀಯ ಸ್ಮಾರಕಗಳಿಗೆ ಭೇಟಿ ನೀಡಲಿದ್ದು, ಪಕ್ಷದ ಕಾರ್ಯಕ್ರಮದಲ್ಲೂ ಭಾಗವಹಿಸಲಿದ್ದಾರೆ. ಗುರುವಾರ ಬೆಳಗ್ಗೆ 9.40ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಲಿದ್ದಾರೆ, 10.30ಕ್ಕೆ ಧಾರವಾಡ ಸಾಧನಕೇರಿಗೆ ತೆರಳಿ ದ.ರಾ.ಬೇಂದ್ರೆ ಸ್ಮಾರಕಕ್ಕೆ ಗೌರವಾರ್ಪಣೆ ಮಾಡಲಿದ್ದಾರೆ.

ಬಳಿಕ ಮುರುಘಾಮಠಕ್ಕೆ ಭೇಟಿ ಕೊಡಲಿರುವ ಅವರು ಅಲ್ಲಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಸೇರಿದಂತೆ ಬಿಜೆಪಿ ಸ್ಥಳೀಯ ಮುಖಂಡರು ಭಾಗವಹಿಲಿದ್ದಾರೆ.

ಮಧ್ಯಾಹ್ನ 12.40ಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿಗೆ ತೆರಳಲಿರುವ ಶಾ ಅವರು, ಅಬ್ಬಿಗೇರಿ ಗ್ರಾಮದಲ್ಲಿ ಮುಷ್ಟಿಧಾನ್ಯ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. 3 ಗಂಟೆಗೆ ಗದಗದ ಪುಟ್ಟರಾಜ ಗವಾಯಿ ಆಶ್ರಮ, 3.20ಕ್ಕೆ ಗದಗಿನ ವೀರನಾರಾಯಣಸ್ವಾಮಿ ದೇವಸ್ಥಾನಕ್ಕೆ ತೆರಳಿ ಕುಮಾರವ್ಯಾಸ ಸನ್ನಿಧಿಗೆ ನಮನ ಸಲ್ಲಿಸಲಿದ್ದಾರೆ. 3.50ಕ್ಕೆ ಪಕ್ಷದ ಪ್ರಮುಖ ಮೋಹನ ಮಾಳಶೆಟ್ಟಿನಿವಾಸಕ್ಕೆ ಭೇಟಿ ನೀಡುವರು.

ಸಂಜೆ 4.50ಕ್ಕೆ ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೆ ಭೇಟಿ ನೀಡುವ ಶಾ, 5.15ರಿಂದ 6.45ರವರೆಗೆ ನಗರದ ಮೂರು ಸಾವಿರ ಮಠದಿಂದ ದುರ್ಗದಬೈಲ್‌ವರೆಗೆ ರೋಡ್‌ ಶೋ ನಡೆಸುವರು. 7.15ಕ್ಕೆ ಹೆಬ್ಬಳ್ಳಿ (ಧಾರವಾಡ ಗ್ರಾಮೀಣ) ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾತ್ರಿ 8.45ಕ್ಕೆ ವಾಣಿಜ್ಯ ನಗರ ಹುಬ್ಬಳ್ಳಿಯ ಉದ್ಯಮಿಗಳು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಧಾರವಾಡದಂತೆಯೇ ರೋಣ ಹಾಗೂ ಹೆಬ್ಬಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.