ಸಿದ್ದರಾಮಯ್ಯ ಬಗ್ಗೆ ಗಂಟೆಗಟ್ಟಲೆ ಹರಿಹಾಯ್ದ ಅಮಿತ್ ಶಾ ಮಹದಾಯಿ ಬಗ್ಗೆ ಬಾಯಿ ಬಿಡಲಿಲ್ಲ
ಬಂದ್ ನಡುವೆಯೂ ರಾಜ್ಯ ಬಿಜೆಪಿ ಪ್ರತಿಷ್ಟೆಯ ವಿಷಯವಾಗಿ ಪರಿವರ್ತನಾ ರ್ಯಾಲಿ ಸಮಾರೋಪ ಸಮಾರಂಭ ಹಮ್ಮಿಕೊಂಡಿತ್ತು.
ಮೈಸೂರು(ಜ.25): ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಗಂಟೆಗೂ ಹೆಚ್ಚು ಕಾಲ ಹರಿಹಾಯ್ದರೂ ಮಹದಾಯಿ ವಿವಾದದ ಬಗ್ಗೆ ಒಂದು ಮಾತು ಆಡಲಿಲ್ಲ.
ಮೈಸೂರಿನಲ್ಲಿ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅವರಿಗೆ ಎಲ್ಲವೂ ಗೊತ್ತಿತ್ತು. ಇಂದು ಮಹದಾಯಿ ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್'ಗೆ ಕರೆ ನೀಡಿದ್ದವು. ಬಂದ್ ನಡುವೆಯೂ ರಾಜ್ಯ ಬಿಜೆಪಿ ಪ್ರತಿಷ್ಟೆಯ ವಿಷಯವಾಗಿ ಪರಿವರ್ತನಾ ರಾಲಿ ಸಮಾರೋಪ ಸಮಾರಂಭ ಹಮ್ಮಿಕೊಂಡಿತ್ತು.
ತಮ್ಮ ಭಾಷಣದಲ್ಲಿ ಇಡೀ ಸರ್ಕಾರವನ್ನು ನಿಂದಿಸಿದರೂ ಪ್ರಸ್ತುತ ವಿಷಯವಾಗಿ ನಡೆಯುತ್ತಿರುವ ಮಹದಾಯಿ ವಿಚಾರವಾಗಿ ಕನ್ನಡಿಗರಿಗೆ ಭರವಸೆ ನೀಡುವುದಿರಲಿ ಒಂದು ಮಾತು ಆಡಲಿಲ್ಲ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರು ಒಂದು ಮಾತು ಆಡದಿರುವ ಬಗ್ಗೆ ಕನ್ನಡಪರ ಸಂಘಟನೆಗಳು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ನನ್ನ ಲೆಕ್ಕ ಕೇಳಿದ್ದಾರೆ : ಈಗ ನಾನು ಲೆಕ್ಕ ಕೊಡೋಕೆ ಬಂದಿದ್ದೇನೆ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಸಿದ್ದರಾಮಯ್ಯ ಅವರು ನನ್ನ ಲೆಕ್ಕ ಕೇಳಿದ್ದಾರೆ. ನಾನು ಲೆಕ್ಕ ಕೊಡೋಕೆ ಬಂದಿದ್ದೇನೆ. ಸಿದ್ದರಾಮಯ್ಯನವರೇ ಕಿವಿ ತೆರೆದು ಕೇಳಿ ಕಾಂಗ್ರೆಸ್ ಸರ್ಕಾರ 60 ವರ್ಷದಲ್ಲಿ ಕೊಡದಷ್ಟು ಹಣ ಕೊಟ್ಟಿದ್ದೇವೆ. ಯುಪಿಎ ಸರ್ಕಾರ ಇದ್ದಾಗ 88 ಸಾವಿರದ 535 ಕೋಟಿ ಕೊಟ್ಟಿದ್ದರು. 14ನೇ ಹಣಕಾಸು ಆಯೋಗದಿಂದ ಕರ್ನಾಟಕ ಸರ್ಕಾರಕ್ಕೆ 2 ಲಕ್ಷ 19 ಸಾವಿರದ 506 ಕೋಟಿ ಅನುದಾನ ಕೊಟ್ಟಿದ್ದೇವೆ.
ಎಲ್ಲಿ ಹೋಯ್ತು ಈಗ 1 ಲಕ್ಷ 30 ಸಾವಿರ ಕೋಟಿ ?
ಕರ್ನಾಟಕಕ್ಕೆ ನಾವು 1 ಲಕ್ಷ 30 ಸಾವಿರ ಕೋಟಿ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಈಗ ಸಿದ್ದರಾಮಯ್ಯನವರನ್ನ ಕೇಳ್ತೀನಿ, 1 ಲಕ್ಷ 30 ಸಾವಿರ ಕೋಟಿ ಎಲ್ಲಿ ಹೋಯ್ತು ? ಸಿದ್ದರಾಮಯ್ಯನವರೇ, ನಿಮ್ಮ ಹಳ್ಳಿ ಅಭಿವೃದ್ಧಿ ಆಗಿದೆಯಾ ? ಹಾಗಾದ್ರೆ, ಎಲ್ಲಿ ಹೋಯ್ತು ಈಗ 1 ಲಕ್ಷ 30 ಸಾವಿರ ಕೋಟಿ ಈ ದುಡ್ಡು ಎಲ್ಲಿ ಹೋಗಿದೆ ಅಂತ ಹೇಳಲಾ ? 5 ವರ್ಷದ ಹಿಂದಿನ ಕಾಂಗ್ರೆಸ್ ನಾಯಕನ ಮನೆ ನೋಡಿ ಶೀಟ್ ಮನೆ, ಸಣ್ಣ ದ್ವಿಚಕ್ರ ವಾಹನ ಇರ್ತಿತ್ತು ಈಗ 5 ವರ್ಷದ ನಂತರ ಶೀಟ್ ಮನೆ 3-4 ಅಂತಸ್ತಿನ ಮನೆ ಆಗಿದೆ. ದುಬಾರಿ ಕಾರುಗಳು ಮನೆ ಮುಂದೆ ನಿಂತಿವೆ
ಕರ್ನಾಟಕಕ್ಕೆ ಮೋದಿ ಸರ್ಕಾರ ಏನು ಮಾಡಿದೆ ಅಂತ ಕೇಳಿದ್ದರು. ಚುನಾವಣೆಗೆ ಖರ್ಚು ಮಾಡಿದ ಒಂದೊಂದು ಪೈಸೆಯ ಲೆಕ್ಕ ಕೊಟ್ಟಿದ್ದೇವೆ. ಅಣ್ಣ ಸಿದ್ದರಾಮಯ್ಯ ನಿಮ್ಮನ್ನ ಕೇಳೋಕೆ ಇಷ್ಟ ಪಡ್ತೀನಿ, ಐಟಿ ಸಿಟಿ ಬೆಂಗಳೂರಿನ ರಸ್ತೆಗಳು ಹೇಗಿವೆ ಹೇಳಿ? 5 ವರ್ಷದಲ್ಲಿ ಕರ್ನಾಟಕದಲ್ಲಿ ಏನು ಸಾಧನೆ ಮಾಡಿದ್ರಿ ? ರೈತರ ಆತ್ಮಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ ದಲಿತರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ'ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚಾಂಮುಡೇಶ್ವರಿ ದೇವಿ ದರ್ಶನ ಪಡೆದ ಅಮಿತ್ ಶಾ
ಸಮಾರೋಪ ಸಮಾರಂಭ ಮುಗಿದ ನಂತರ ಶಾ ಅವರು ಚಾಮುಂಡೇಶ್ವರಿ ದರ್ಶನ ಪಡೆದು ದೆಹಲಿಗೆ ವಾಪಸಾದರು.