'ಕೇರಳ, ಬಂಗಾಳದಂಥ ರಾಜ್ಯ ಗೆದ್ದರಷ್ಟೇ ಉತ್ತುಂಗಕ್ಕೇರಿದಂತೆ'
ಕೇರಳ, ಬಂಗಾಳದಂಥ ರಾಜ್ಯ ಗೆದ್ದರಷ್ಟೇ ಉತ್ತುಂಗಕ್ಕೇರಿದಂತೆ| ನಾವಿನ್ನೂ ಉತ್ತುಂಗದ ಶಿಖರವೇರಿಲ್ಲ: ಅಮಿತ್ ಶಾ
ನವದೆಹಲಿ[ಜೂ.14]: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿರಬಹುದು. ಆದರೆ, ತನ್ನ ಉತ್ತುಂಗಕ್ಕೆ ಇನ್ನೂ ತಲುಪಿಲ್ಲ. ಕೇರಳ, ಬಂಗಾಳದಂತಹ ರಾಜ್ಯಗಳನ್ನು ಗೆದ್ದರಷ್ಟೇ ಬಿಜೆಪಿ ಉತ್ತುಂಗಕ್ಕೆ ಏರಿದಂತೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ವಿವಿಧ ರಾಜ್ಯದ ಸಂಘಟಕರೊಂದಿಗೆ ಸಭೆ ನಡೆಸಿದ ಅಮಿತ್ ಶಾ, ಪಕ್ಷದ ಪ್ರಮುಖ ಮುಖಂಡರು ಸಂಘಟನೆಯನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸಬೇಕು. ಹೆಚ್ಚು ಹೆಚ್ಚು ಜನರನ್ನ ಪಕ್ಷಕ್ಕೆ ಸೇರ್ಪಡೆ ಮಾಡಬೇಕು. ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಸರ್ಕಾರ ರಚಿಸಿದರಷ್ಟೇ ಪಕ್ಷ ಉತ್ತುಂಗಕ್ಕೆ ಏರಲಿದೆ ಎಂದು ಹೇಳಿದ್ದಾರೆ.
ವರ್ಷಾಂತ್ಯದವರೆಗೂ ಬಿಜೆಪಿಗೆ ಶಾ ಅಧ್ಯಕ್ಷ?
ಕೇಂದ್ರ ಗೃಹ ಸಚಿವರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿರುವ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ವರ್ಷಾಂತ್ಯದವರೆಗೂ ಅಧ್ಯಕ್ಷೆ ಹುದ್ದೆಯಲ್ಲಿ ಮುಂದುವರೆಯುವುದು ಬಹುತೇಕ ಖಚಿತವಾಗಿದೆ. ಗುರುವಾರ ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.