ದುರಂತ ಮೊದಲ ಬಾರಿಯಲ್ಲ; ಯೋಗಿ ರಾಜಿನಾಮೆ ಪ್ರಶ್ನೆಯೇ ಇಲ್ಲ: ಅಮಿತ್ ಶಾ
ಗೋರಖ್’ಪುರದ ಬಿಆರ್’ಡಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ದುರಂತಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಿನಾಮೆ ನೀಡಬೇಕು ಎನ್ನುವ ಕಾಂಗ್ರೆಸ್ ಒತ್ತಾಯವನ್ನು ಅಮಿತ್ ಶಾ ತಳ್ಳಿ ಹಾಕಿದ್ದಾರೆ.
ನವದೆಹಲಿ (ಆ.14): ಗೋರಖ್’ಪುರದ ಬಿಆರ್’ಡಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ದುರಂತಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಿನಾಮೆ ನೀಡಬೇಕು ಎನ್ನುವ ಕಾಂಗ್ರೆಸ್ ಒತ್ತಾಯವನ್ನು ಅಮಿತ್ ಶಾ ತಳ್ಳಿ ಹಾಕಿದ್ದಾರೆ.
ಭಾರತದಂತಹ ದೊಡ್ಡ ದೇಶಗಳಲ್ಲಿ ಈ ಹಿಂದೆಯೂ ಕೂಡಾ ಇಂತಹ ಘಟನೆಗಳು ನಡೆದಿವೆ. ಇದೇ ಮೊದಲ ಬಾರಿಯೇನಲ್ಲ. ಹಾಗಾಗಿ ಆದಿತ್ಯನಾಥ್ ರಾಜಿನಾಮೆ ಪ್ರಶ್ನೆಯೇ ಇಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಆ.07 ರಂದು ಆಕ್ಸಿಜನ್ ಪೂರೈಕೆ ಕೊರತೆಯಿಂದ 70 ಮಕ್ಕಳು ಮೃತಪಟ್ಟಿದ್ದರು. ಸಾವಿನ ಬಗ್ಗೆ ವರದಿ ನೀಡುವಂತೆ ಮಾನವ ಹಕ್ಕು ಆಯೋಗ ಸರ್ಕಾರಕ್ಕೆ ನೋಟೀಸ್ ನೀಡಿದೆ.
ಏತನ್ಮಧ್ಯೆ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲು ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿ ಪ್ರಮುಖವಾದ ಹಬ್ಬವಾಗಿದ್ದು, ಅದ್ದೂರಿಯಾಗಿ ಸಾಂಪ್ರದಾಯಿಕವಾಗಿ ಆಚರಿಸಲು ಪೊಲೀಸರು ಆಯೋಜನೆ ಮಾಡಬೇಕೆಂದು ಯೋಗಿ ಆದೇಶಿಸಿದ್ದಾರೆ.
ಇದಕ್ಕೆ ಅಮಿತ್ ಶಾ ಕೂಡಾ ದನಿಗೂಡಿಸಿದ್ದಾರೆ. ಹಬ್ಬಗಳು ಜನರ ವೈಯಕ್ತಿಕ ನಂಬಿಕೆಗಳಿಗೆ ಬಿಟ್ಟದ್ದು. ಇದೊಂದು ಸರ್ಕಾರದ ಹಬ್ಬವಲ್ಲ ಎಂದು ಶಾ ಹೇಳಿದ್ದಾರೆ.
ಅಖಿಲೇಶ್'ರಿಂದ 2 ಲಕ್ಷ ರೂ ಪರಿಹಾರ
ಮೃತಪಟ್ಟ ಮಕ್ಕಳ ಕುಟುಂಬದವರಿಗೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ 2 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಇದನ್ನು ರಾಜಕೀಯಗೊಳಿಸಬಾದು. ಸಿಬಿಐ ತನಿಖೆಯಾಗಬೇಕು ಎಂದಿದ್ದಾರೆ.