ಸಿದ್ಧಗಂಗಾ ಶ್ರೀ ಕಾಲಿಗೆ ಬಿದ್ದ ಅಮಿತ್ ಶಾ, ಫೋಟೋ ಕನ್ನಡದಲ್ಲೇ ಟ್ವೀಟ್!
- ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅಮಿತ್ ಶಾ, ಶ್ರೀಗಳೊಂದಿಗೆ ಸುಮಾರು 20 ನಿಮಿಷಗಳ ಕಾಲ ಚರ್ಚೆ
- ಸ್ವಾಮೀಜೀ ಕಾಲಿಗೂ ಬಿದ್ದು ನಮಸ್ಕರಿಸಿ, ಅವರಿಂದ ಆಶೀರ್ವಾದ ಪಡೆದ ಅಮಿತ್ ಶಾ
ತುಮಕೂರು: ಚುನಾವಣೆ ಹತ್ತಿರವಾಗ್ತಿದ್ದಂತೆ ಪ್ರಚಾರದ ಅಬ್ಬರ ಜೋರಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ 2-ದಿನಗಳ ರಾಜ್ಯದ ಪ್ರವಾಸದಲ್ಲಿದ್ದಾರೆ. ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅಮಿತ್ ಶಾ ಸುಮಾರು 20 ನಿಮಿಷಗಳ ಕಾಲ ಶ್ರೀಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಸ್ವಾಮೀಜಿಗಳನ್ನು ಭೇಟಿಯಾಗುವ ಸಂದರ್ಭದಲ್ಲಿ ಅಮಿತ್ ಶಾ ಈ ಬಾರಿ ಬಹಳ ಜಾಗರೂಕರಾಗಿದ್ದರು. ಅಮಿತ್ ಶಾ ಸ್ವಾಮೀಜೀ ಕಾಲಿಗೂ ಬಿದ್ದು ನಮಸ್ಕರಿಸಿ, ಶ್ರೀಗಳಿಂದ ಆಶೀರ್ವಾದವನ್ಜು ಪಡೆದಿದ್ದಾರೆ. ಅದೇ ಫೋಟೋವನ್ನು ತಮ್ಮ ಟ್ವೀಟರ್ ಖಾತೆಗೆ ಅಪ್ಲೋಡ್ ಮಾಡಿ, ಕನ್ನಡದಲ್ಲೇ ಟ್ವೀಟಿಸಿದ್ದಾರೆ!
ಇಂದು ಸಿದ್ಧಗಂಗಾ ಮಠದಲ್ಲಿ ನಡೆದಾಡುವ ದೇವರು ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದೆನು. ಈ ವಯಸ್ಸಿನಲ್ಲೂ ಅವರು ಮಾಡುತ್ತಿರುವ ನಿರಂತರ ಕಾಯಕ ಅತ್ಯಂತ ಸ್ಫೂರ್ತಿದಾಯಕ. ಅವರ ಜೀವನವೇ ನಮಗೆ ಪಾಠ. pic.twitter.com/DWyhmX5TIw
— Amit Shah (@AmitShah) March 26, 2018
ಕಳೆದ ವರ್ಷ ಆಗಸ್ಟ್’ನಲ್ಲಿ ನಾಗಮಂಗಲದಲ್ಲಿ ಆದಿಚುಂಚನಾಗಿರಿ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮಿತ್ ಶಾ ಸ್ವಾಮೀಜಿಗಳ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತು ಚರ್ಚೆ ನಡೆಸಿದ್ದರು. ಆ ಫೋಟೋ ಬಳಿಕ ವೈರಲ್ ಆಗಿತ್ತು, ಶಾ ಸ್ವಾಮೀಜಿಗೆ ಅಗೌರವ ತೋರಿದ್ದಾರೆಂದು ಭಕ್ತರಿಂದ ಆಕ್ರೋಶ ವ್ಯಕ್ತವಾಗಿತ್ತು.