ದೇಶದ ಅತಿಹೆಚ್ಚು ಕ್ಷೇತ್ರಗಳಿರುವ ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್‌ರನ್ನೇ ಯಾಕೆ ಆಯ್ಕೆ ಮಾಡಿದ್ದು?| ಅಮಿತ್ ಶಾ, ಪ್ರಧಾನಿ ಮೋದಿ ಯಾಕೆ ಈ ನಿರ್ಧಾರ ಕೈಗೊಂಡ್ರು?| ಅಮಿತ್ ಶಾ ಬಿಚ್ಚಿಟ್ಟ ರಹಸ್ಯ

ಲಕ್ನೋ[ಜು.28]: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಾನು ಹಾಗೂ ಪ್ರಧಾನಿ ಮೋದಿ ದೇಶದ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳುಳ್ಳ ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್ರನ್ನೇ ಯಾಕೆ ಆಯ್ಕೆ ಮಾಡಿದ್ದು? ಎಂಬ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಗೋರಖ್‌ಧಾಮ್ ಮಂದಿರದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ ಯೋಗಿ ಆದಿತ್ಯನಾಥ್‌ರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾಗ ಹಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಯೋಗಿ ಆದಿತ್ಯನಾಥ್ ಹಿಂದೂ ಐಕಾನ್ ಆಗಿ ರಾಜ್ಯದಲ್ಲಿ ಫೇಮಸ್ ಆಗಿದ್ದಾರೆ, ಹೀಗಾಗಿ ಈ ನಿರ್ಧಾರ ಕೈಗೊಂಡಿರಬಹುದು ಎಂಬುವುದು ಹಲವರ ಅಭಿಪ್ರಾಯವಾಗಿತ್ತು. ಹೀಗಿದ್ದರೂ ಅವರಿಗೆ ರಾಜಕೀಯ ಕ್ಷೇತ್ರದ ಯಾವುದೇ ಅನುಭವವಿಲ್ಲ ಎಂಬುವುದು ಈ ಅಚ್ಚರಿಯನ್ನು ಇಮ್ಮಡಿಗೊಳಿಸಿತ್ತು. 

ಆದರೀಗ ಈ ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿರುವ ಅಮಿತ್ ಶಾ ಉತ್ತರ ಪ್ರದೇಶದ ಸಿಎಂ ಆಗಿ ಯೋಗಿ ಆದಿತ್ಯನಾಥ್‌ರನ್ನೇ ಅಯ್ಕೆ ಮಾಡಿದ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಲಕ್ನೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಶಾ 'ಯೋಗಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಹಲವರು ಯೋಗಿ ಆದಿತ್ಯನಾಥ್‌ಗೆ ನಗರಾಡಳಿತ ನಿರ್ವಹಿಸುದ ಅನುಭವ ಕೂಡಾ ಇಲ್ಲ, ಹೀಗಿರುವಾಗ ಅವರನ್ನೇಕೆ ಇಷ್ಟು ದೊಡ್ಡ ರಾಜ್ಯದ ಸಿಎಂ ಆಗಿ ನೇಮಿಸುತ್ತೀರಿ? ಎಂದು ನನ್ನ ಬಳಿ ಪ್ರಶ್ನಿಸಿದ್ದರು?'

’ನಾನು ಹಾಗೂ ಪ್ರಧಾನಿ ಮೋದಿ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲು ನಿರ್ಧರಿಸಿದ್ದೆವು. ಹೌದು ಅವರಿಗೆ ನಗರಾಡಳಿತ ನಡೆಸಿದ ಅನುಭವವೂ ಇರಲಿಲ್ಲ ಎಂಬುವುದು ನಿಜ. ಅವರು ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದವರು. ಆದರೆ ಅವರೊಬ್ಬ ಶ್ರಮಜೀವಿಯಾಗಿದ್ದರು. ಹೀಗಾಗಿ ಅನುಭವದ ಕೊರತೆಯನ್ನು ತಮ್ಮ ಹಾದಿಯಲ್ಲಿ ಸಮಸ್ಯೆಯಾಗಲು ಅವರು ಬಿಡಲಿಲ್ಲ. ಕಠಿಣ ಪರಿಶ್ರಮದಿಂದ ಜವಾಬ್ದಾರಿ ನಿಭಾಯಿಸಿದ್ದಾರೆ ' ಎಂದಿದ್ದಾರೆ

2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಜಯ ಗಳಿಸಿತು. ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಜನರಿಗೆ ನೀಡಿದ ಭರವಸೆಯ ಮಾತುಗಳ ಮೇಲೆ ವಿಶ್ವಾಸವಿಟ್ಟ ಈ ಜಯ ತಂದುಕೊಟ್ಟಿದ್ದರು ಎನ್ನಲಾಗಿತ್ತು. ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಯಾವೊಬ್ಬ ನಾಯಕನನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿರಲಿಲ್ಲ. ಆದರೆ ಯೋಗಿ ಆದಿತ್ಯನಾಥ್ ಹೆಸರು ಆರಂಭದಿಂದಲೂ ಸೌಂಡ್ ಮಾಡಿತ್ತು. ಆರ್‌ಎಸ್‌ಎಸ್‌ ಮನೋಜ್ ಸಿನ್ಹಾರನ್ನು ಸಿಎಂ ಆಗಿ ನೇಮಿಸುವಂತೆ ಸೂಚಿಸಿತ್ತು. ಹೀಗಿದ್ದರೂ ಪಕ್ಷ ಆದಿತ್ಯನಾಥ್ ರನ್ನು ಮುಖ್ಯಮಂತ್ರಿಯಾಗಿಸಿತ್ತು.